ಚಿರಂಜೀವಿ ಸರ್ಜಾ ಪುಣ್ಯತಿಥಿ ಪತಿ ಅಗಲಿಕೆ ಬಳಿಕ ಮೇಘನಾ ರಾಜ್ ವೈಯಕ್ತಿಕ ಜೀವನದ ಬಗ್ಗೆ ಕೇಳಿ ಬಂದಿತ್ತು ದೊಡ್ಡ ವದಂತಿ

ನಟಿ ಮೇಘನಾ ರಾಜ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಪ್ರೀತಿಸಿ ಮದುವೆ ಆದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ಇದು ನಿಜಕ್ಕೂ ಶಾಕಿಂಗ್ ವಿಚಾರ ಆಗಿತ್ತು. ಬುಧವಾರ (ಜೂನ್ 7) ಚಿರಂಜೀವಿ ಸರ್ಜಾ ಮೃತಪಟ್ಟು ಮೂರು ವರ್ಷ ಕಳೆಯಲಿದೆ. ಅವರನ್ನು ಕಳೆದುಕೊಂಡಿರುವ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಚಿರು ಮೃತಪಟ್ಟ ಬಳಿಕ ಮೇಘನಾ ಬಗ್ಗೆ ದೊಡ್ಡ ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದರು. ಅದು 2020, ಜೂನ್ 7. ಚಿರಂಜೀವಿಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ಮಧ್ಯಾಹ್ನದ ವೇಳೆಗೆ ಹೊರಬಿತ್ತು. ಬಳಿಕ ಅವರು ಮೃತಪಟ್ಟರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಅಕ್ಷರಶಃ ಎಲ್ಲರೂ ಶಾಕ್​ಗೆ ಒಳಗಾದರು. ಅನೇಕ ತಿಂಗಳ ಕಾಲ ಮೇಘನಾ ರಾಜ್ ಅವರು ಕಣ್ಣೀರಲ್ಲಿ ಕೈ ತೊಳೆದರು. ಚಿರು ಮೃತಪಡುವಾಗ ಮೇಘನಾ ಪ್ರೆಗ್ನೆಂಟ್ ಆಗಿದ್ದರು. ಚಿರು ಮೃತಪಟ್ಟ ಕೆಲ ತಿಂಗಳ ನಂತರ ಮೇಘನಾಗೆ ಗಂಡುಮಗು ಜನಿಸಿತು.

ಗಂಡುಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ಮೇಘನಾ ರಾಜ್ ನಾಮಕರಣ ಮಾಡಿದ್ದಾರೆ. ಆತ ಹುಟ್ಟಿದ ಬಳಿಕ ಮೇಘನಾ ಬದುಕು ಬದಲಾಯಿತು. ಇದರ ಜೊತೆಗೆ ಒಂದು ವದಂತಿ ಹುಟ್ಟಿಕೊಂಡಿತ್ತು. ‘ಮೇಘನಾ ರಾಜ್ ಮತ್ತೆ ಮದುವೆ ಆಗುತ್ತಾರಂತೆ’ ಎಂದೆಲ್ಲ ಸುದ್ದಿ ಹಬ್ಬಿಸಲಾಯಿತು. ಇದಕ್ಕೆ ಮೇಘನಾ ಅವರು ಸ್ಪಷ್ಟನೆ ನೀಡಿದ್ದರು. ಕಡ್ಡಿಮುರಿದಂತೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಬಾಲಿವುಡ್ ಬಬಲ್​ ವೆಬ್​​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್​ ಮಾತನಾಡಿದ್ದರು. ‘ಒಂದು ವರ್ಗದ ಜನರು ನನ್ನ ಬಳಿ ಎರಡನೇ ಮದುವೆ ಆಗು ಎಂದು ಸಲಹೆ ನೀಡಿದ್ದಾರೆ. ಇನ್ನೂ ಒಂದು ವರ್ಗದ ಜನ ನಿಮ್ಮ ಮಗುವಿನ ಜತೆ ಖುಷಿಯಿಂದ ಇರಿ ಎಂದಿದ್ದಾರೆ. ನಾನು ಯಾರ ಮಾತನ್ನು ಕೇಳಬೇಕು. ಜಗತ್ತು ಏನನ್ನು ಬೇಕಾದರೂ ಹೇಳಲಿ, ನೀನು ಮನಸ್ಸಿನ ಮಾತನ್ನು ಕೇಳು ಎಂದು ಚಿರು ಯಾವಾಗಲೂ ನನಗೆ ಹೇಳುತ್ತಿದ್ದರು. ಎಂದಿಗೂ ಮತ್ತೊಂದು ಮದುವೆಯ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ. ನಾಳೆ ಏನಾಗುತ್ತದೆ ಎಂಬ ಬಗ್ಗೆ ಯೋಚಿಸಲ್ಲ. ಮುಂದಿನ ದಿನಗಳಲ್ಲಿ ನನ್ನ ಜೀವನ ಹೇಗಿರಬಹುದು ಎಂಬ ಬಗ್ಗೆ ನಾನು ಚಿಂತಿಸಲ್ಲ’ ಎಂದಿದ್ದರು ಮೇಘನಾ ರಾಜ್.