ಈಗ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾ ಟಿಕೆಟ್​ ಬೆಲೆ ಕೇವಲ 50 ರೂಪಾಯಿ;

ಮಲ್ಟಿಪ್ಲೆಕ್ಸ್​ನಲ್ಲಿ 99 ರೂಪಾಯಿಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಕಥೆ ಆಧರಿಸಿದ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಶಕರ ವಲಯದಿಂದಲೂ ಪಾಸಿಟಿವ್​ ಮಾತುಗಳು ಕೇಳಿಬಂದಿವೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಬಳಿಕ ಚಿತ್ರಮಂದಿರಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು. ಈಗ ಪ್ರೇಕ್ಷಕರಿಗೆ ಈ ಸಿನಿಮಾ ತಂಡದ ಕಡೆಯಿಂದ ಒಂದು ಬಂಪರ್​ ಆಫರ್​ ನೀಡಲಾಗಿದೆ. ‘ಡೇರ್​ ಡೆವಿಲ್​ ಮುಸ್ತಫಾ’ ಚಿತ್ರದ ಟಿಕೆಟ್​ ಬೆಲೆಯನ್ನು ತಗ್ಗಿಸಲಾಗಿದೆ. ಏಕಪರದೆ ಚಿತ್ರಮಂದಿರಗಳು ಮಾತ್ರವಲ್ಲದೇ ಮಲ್ಟಿಪ್ಲೆಕ್ಸ್​ಗಳಲ್ಲೂ ಟಿಕೆಟ್ ದರ ಕಡಿತ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಸೆಕೆಂಡ್​ ಕ್ಲಾಸ್​ಗೆ 50 ರೂಪಾಯಿ ಹಾಗೂ ಬಾಲ್ಕನಿಗೆ 75 ರೂಪಾಯಿ ನಿಗದಿ ಮಾಡಲಾಗಿದೆ. ಕೆಲವು ಮಲ್ಟಿಪ್ಲೆಕ್ಸ್​ಗಳಲ್ಲಿ 99 ರೂಪಾಯಿಗೆ ಟಿಕೆಟ್​ ಲಭ್ಯವಾಗುತ್ತಿವೆ. ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಗಾಂಧಿನಗರದಲ್ಲಿದೆ.

ಅದು ‘ಡೇರ್​ಡೆವಿಲ್​ ಮುಸ್ತಫಾ’ ವಿಚಾರದಲ್ಲಿ ನಿಜವಾಗಿದೆ. ಇದು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಾಣ ಮಾಡಿರುವ ಸಿನಿಮಾ. ಶಶಾಂಕ್​ ಸೋಗಾಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಈಗ ಟಿಕೆಟ್​ ಬೆಲೆ ತಗ್ಗಿಸಿರುವುದರಿಂದ ಇನ್ನಷ್ಟು ಜನರನ್ನು ತಲುಪಲು ಸಾಧ್ಯವಾಗಲಿದೆ. ಚಿತ್ರತಂಡದ ಈ ನಿರ್ಧಾರಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾಗಳ ಟಿಕೆಟ್​ ದರ ಜಾಸ್ತಿ ಇರುವುದರಿಂದಲೇ ಪ್ರೇಕ್ಷಕರು ಸಿನಿಮಾ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಿಗೆ ಬರುತ್ತಿಲ್ಲ ಎಂಬ ಮಾತಿದೆ. ಹಾಗಾಗಿ ಟಿಕೆಟ್​ ಬೆಲೆ ತಗ್ಗಿಸುವ ಮೂಲಕ ಪ್ರೇಕ್ಷಕರು ಸೆಳೆಯುವ ಪ್ರಯತ್ನ ಬೇರೆ ಸಿನಿಮಾಗಳಿಂದ ಈ ಮೊದಲು ಕೂಡ ಆಗಿದ್ದುಂಟು. ಆಗೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾಗೆ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ. ಶಿಶಿರ್​ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್​ ಭಾರದ್ವಾಜ್​, ಆಶಿತ್​ ಶ್ರೀವತ್ಸಾ, ಅಭಯ್​, ಮಂಡ್ಯ ರಮೇಶ್​, ಉಮೇಶ್​, ಪ್ರೇರಣಾ ಮುಂತಾದ ಕಲಾವಿದರು ‘ಡೇರ್​ಡೆವಿಲ್​ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಮೈಸೂರು ಸಂಸದ ಪ್ರತಾಪ್​ ಸಿಂಹ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ‘ನಾವೆಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬುದನ್ನು ಈ ಸಿನಿಮಾ ನೋಡಿ ಕಲಿಯಬೇಕು. ಎಲ್ಲರೂ ಅನುಸರಿಸಬಹುದಾದ ಸಂದೇಶ ಇದರಲ್ಲಿ ಇದೆ. ಬೋಧನೆ ಮಾಡುವಂತಹ ಸ್ಟೊರಿ ಇದಲ್ಲ. ಇದು ಖುಷಿ ನೀಡುತ್ತದೆ. ಸಾಕಷ್ಟು ಮನರಂಜನೆ ಇದೆ. ಸಣ್ಣ ಪಾತ್ರಗಳಿಗೂ ಪ್ರತಿ ಕಲಾವಿದರು ಜೀವ ತುಂಬಿದ್ದಾರೆ’ ಎಂದು ಅವರು ಹೇಳಿದ್ದರು.