ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ರೂಪಾಲಿ ನಾಯ್ಕ್ ವಿರೋಧ: ಆಕ್ಷೇಪಣೆ ಸಲ್ಲಿಸಲು ನಿರ್ಧಾರ, ದೆಹಲಿಗೆ ನಿಯೋಗ ಹೋಗಲು ಸಿಎಂ ತೀರ್ಮಾನ

ಕಾರವಾರ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿ ಜಾರಿಯಾದರೆ ಕ್ಷೇತ್ರದ ಜನತೆಯ ಬದುಕು ತುಂಬಾ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಸ್ತೂರಿ ರಂಗನ್ ನೇತೃತ್ವದ ಸಮಿತಿ 2013 ರಲ್ಲಿ ತನ್ನ ವರದಿಯನ್ನು ಒಪ್ಪಿಸಿದೆ. ಆದರೆ ನನ್ನ ಕ್ಷೇತ್ರದಲ್ಲಿ ಸೀಬರ್ಡ್ ನೌಕಾನೆಲೆ, ಕೈಗಾ ಅಣು ಸ್ಥಾವರಗಳಿದ್ದು ಇದನ್ನು ಕಸ್ತೂರಿ ರಂಗನ್ ಸಮಿತಿ ಕಡೆಗಣಿಸಿದೆ. ಅಣು ವಿದ್ಯುತ್ ಯೋಜನೆಯಲ್ಲಿ 5 ಹಾಗೂ 6ನೇ ಘಟಕದ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ. ಚತುಷ್ಪಥ ರಸ್ತೆಯೂ ಆಗಿದೆ. ಇದೆಲ್ಲವನ್ನು ವರದಿಯಲ್ಲಿ ಹೇಳಲಾಗಿಲ್ಲ. ಅಂದರೆ ಸಮೀಕ್ಷೆಯನ್ನೇ ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸಿದರು. ಇನ್ನು ಈ ವರದಿ ಅನೇಕ ಲೋಪದೋಷಗಳಿಂದ ಕೂಡಿದೆ. ಇದು ಅನುಷ್ಠಾನಕ್ಕೆ ಬಂದರೆ ಕಾರವಾರ-ಅಂಕೋಲಾ ತಾಲೂಕಿನ ಜನರು ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಮೊದಲೆ ಅಭಿವೃದ್ಧಿಯಲ್ಲಿ ನನ್ನ ಕ್ಷೇತ್ರ ಹಿಂದುಳಿದಿದೆ. ಈ ವರದಿ ಜಾರಿಯಿಂದ ಅಭಿವೃದ್ಧಿ ಸ್ಥಗಿತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ 600 ಕ್ಕೂ ಅಧಿಕ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೊಷಿಸಿ ಕೇಂದ್ರ ಪರಿಸರ ಮಂತ್ರಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಜಾರಿಯಾದಲ್ಲಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಬರಲು ಸಾಧ್ಯವಿಲ್ಲ. ರಸ್ತೆ, ಕಟ್ಟಡಗಳ ನಿರ್ಮಾಣಕ್ಕೂ ಪರವಾನಗಿ ಪಡೆಯುವ ಅನಿವಾರ್ಯತೆ ಎದುರಾಗಲಿದೆ. ಪರಿಸರ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಕಾರವಾರ ತಾಲೂಕಿನ 36, ಅಂಕೋಲಾದ 43 ಗ್ರಾಮಗಳು ಸೇರಿವೆ ಎಂದು ತಿಳಿಸಿದರು.

ಪ್ರಾಣಿ, ಪಕ್ಷಿ, ಮರಗಳಂತೆ ಮನುಷ್ಯನಿಗೂ ಜೀವನ ನಡೆಸಲು ಅವಕಾಶವಿರಬೇಕು. ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಿನಲ್ಲೇ ವಾಸಿಸುವ ಮಲೆನಾಡು ಮತ್ತು ಕರಾವಳಿಗರ ಬದುಕನ್ನೇ ಕಸಿದುಕೊಂಡAತಾಗುತ್ತದೆ. ಈ ಬಗ್ಗೆ ಸಾರ್ವಜನಿಕರೂ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು.

ಇನ್ನು ಚರ್ಚೆ ಬಳಿಕ ಈ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಒಕ್ಕೊರಲಿನಿಂದ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಜುಲೈ 25 ಅಥವಾ 26ರಂದು ದೆಹಲಿಗೆ ನಿಯೋಗ ಹೋಗಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಎಸ್.ಅಂಗಾರ, ಆನಂದ ಸಿಂಗ್, ಶಿವರಾಮ ಹೆಬ್ಬಾರ್ ಹಾಗೂ ಶಾಸಕರು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.