ಮಕ್ಕಳು ಬರೋ ಮುನ್ನವೇ ಶಾಲಾ ಗೋಡೆ ಕುಸಿತ: ತಪ್ಪಿದ ಭಾರೀ ದುರಂತ

ಹಾಸನ: ಭಾರೀ ಮಳೆಯಿಂದ ಶಾಲೆಯ ಗೋಡೆ ಕುಸಿದುಬಿದ್ದಿದ್ದು ಭಾರೀ ಅನಾಹುತವೊಂದು ತಪ್ಪಿದ ಘಟನೆ ಸಕಲೇಶಪುರ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇಂದು ಸೋಮವಾರವಾದ್ದರಿಂದ ಅದೃಷ್ಟವಶಾತ್ ಮುಂಜಾನೆ ಮಕ್ಕಳು ಶಾಲೆಗೆ ಬರೋ ಮೊದಲೇ ಶಾಲೆಯ ಗೋಡೆ ಕುಸಿದು ಬಿದ್ದಿದೆ.

ಕಳೆದ ಎರಡು ವಾರಗಳಿಂದ ಸಕಲೇಶಪುರ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ಒಂದು ವಾರದ ರಜೆ ಬಳಿಕ ಇಂದು ಶಾಲೆಗಳು ಪುನರಾರಂಭವಾಗಿವೆ. ಅದೃಷ್ಟವಶಾತ್ ಶಾಲೆಗೆ ಮಕ್ಕಳು ಬರೋ ಮೊದಲೇ ಘಟನೆ ನಡೆದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಶೀಘ್ರದಲ್ಲಿ ಶಾಲಾ ಕೊಠಡಿ ದುರಸ್ತಿ ಮಾಡುವಂತೆ ಪೋಷಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.