ದಾಂಡೇಲಿ :ಯಶಸ್ವಿಯಾಗಿ ಸಂಪನ್ನಗೊಂಡ ಅರಣ್ಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿಗೆ ನಡೆದ ಆರೋಗ್ಯ ಶಿಬಿರ

ದಾಂಡೇಲಿ : ಸದಾ ಅರಣ್ಯ ಸಂರಕ್ಷಣೆಗಾಗಿ ಟೊಂಕಕಟ್ಟಿ ಶ್ರಮಿಸುವ ಅರಣ್ಯ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಹಳಿಯಾಳ ಅರಣ್ಯ ವಿಭಾಗ, ಲಯನ್ಸ್ ಕ್ಲಬ್ ದಾಂಡೇಲಿ, ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆ ಹಾಗೂ ಧಾರವಾಡದ ಡಾ.ಅಗರವಾಲ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಡಿ ನಗರದ ಹಳೆದಾಂಡೇಲಿಯಲ್ಲಿರುವ ಹಾರ್ನ್ ಬಿಲ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರವು ಬುಧವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್.ಬಾಲಚಂದ್ರ ಅವರು ಉದ್ಘಾಟಿಸಿ ಮಾತನಾಡುತ್ತಾ, ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಅದನ್ನು ತಿಳಿದು ಅದಕ್ಕೆ ಸೂಕ್ತವಾದ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಈ ಶಿಬಿರ ಸಹಕಾರಿಯಾಗಲಿದೆ. ಬಿಪಿ, ಶುಗರ್, ಕಣ್ಣು, ಹೃದಯಕ್ಕೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ ಎಂದರು. ಸದೃಢ ಆರೋಗ್ಯವಿದ್ದರೇ ಮಾತ್ರ ಸದೃಢ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ.ಕೆ.ಶೇಟ್ ಮತ್ತು ಕೆ.ಡಿ.ನಾಯ್ಕ ಅವರು ಮಾತನಾಡಿ ಎರಡು ದಿನಗಳವರೆಗೆ ನಡೆಯುವ ಈ ಶಿಬಿರದಲ್ಲಿ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿಗಳಾದ ಅಪ್ಪರಾವ್ ಕಲಶೆಟ್ಟಿ, ಸಂಗಮೇಶ್ ಪಾಟೀಲ್, ಅಶೋಕ್ ಶಿಳ್ಳನ್ನವರ, ಬಸವರಾಜ್.ಎಂ, ಚಂದ್ರಕಾಂತ್ ಉಪ್ಪರಗಿ, ಸಿ.ಜಿ.ನಾಯ್ಕ, ಮಹಮ್ಮದ್ ಶಫಿ ಹಾಗೂ ಉಪ ವಲಯಾರಣ್ಯಾಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಲಯನ್ಸ್ ಕ್ಲಬಿನ ಪದಾಧಿಕಾರಿಗಳು, ಸದಸ್ಯರುಗಳು, ಸುಚಿರಾಯ್ ಆಸ್ಪತ್ರೆ ಹಾಗೂ ಡಾ.ಅಗರವಾಲ ಕಣ್ಣಿನ ಆಸ್ಪತ್ರೆಯ ವೈದ್ಯರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ಆರೋಗ್ಯ ತಪಾಸಣೆಯನ್ನು ಪಡೆದುಕೊಂಡು ತಜ್ಞ ವೈದ್ಯರುಗಳಿಂದ ಅಗತ್ಯ ಆರೋಗ್ಯ ಸಲಹೆಗಳನ್ನು ಪಡೆದುಕೊಂಡರು.