ಪಶ್ಚಿಮ ಬಂಗಾಳದ ಪರಿಸ್ಥಿತಿ ಉಕ್ರೇನ್​ಗಿಂತಲೂ ಕೆಟ್ಟದಾಗಿದೆ: ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ಪರಿಸ್ಥಿತಿ ಉಕ್ರೇನ್​ಗಿಂತಲೂ ಕೆಟ್ಟದಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಅಕ್ರಮ ಪಟಾಕಿಗಳಿಗೆ ಸಂಬಂಧಿಸಿದಂತೆ ಸೋಮವಾರ ಮತ್ತೊಂದು ಸ್ಫೋಟ ಸಂಭವಿಸಿದೆ. ಏಳು ದಿನದ ಅವಧಿಯಲ್ಲಿ ಸಂಭವಿಸಿದ 3ನೇ ಸ್ಫೋಟ ಇದಾಗಿದೆ. ಪಶ್ಚಿಮ ಬಂಗಾಳದ ಸ್ಥಿತಿಯು ಉಕ್ರೇನ್‌ಗಿಂತ ಕೆಟ್ಟದಾಗಿದೆ. ಉಕ್ರೇನ್‌ನಲ್ಲಿ ಸ್ಫೋಟಗಳ ಸಂಖ್ಯೆ ಬಂಗಾಳಕ್ಕಿಂತ ಕಡಿಮೆ ಇದೆ. ಅಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತಿಯುತವಾಗಿದೆ, ಆದರೆ ಬಂಗಾಳದಲ್ಲಿ ಸ್ಫೋಟಗಳು ಸಂಭವಿಸುತ್ತಲೇ ಇರುತ್ತವೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಸುವೇಂದು ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಅವರು 400 ಸ್ಥಾನಗಳನ್ನು  ಗೆಲ್ಲುತ್ತಾರೆ ಎಂದು ಹೇಳಿದರು.

ಕೇವಲ ಏಳು ದಿನಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದು, ಇತ್ತೀಚಿನ ಒಂದು ಸೋಮವಾರ ವರದಿಯಾಗಿದೆ. ಬಿರ್ಭೂಮ್ ಜಿಲ್ಲೆಯ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ಸಂಭವಿಸಿದ ಇತ್ತೀಚಿನ ಸ್ಫೋಟದಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ದಕ್ಷಿಣ 24 ಪರಗಣಸ್ ಜಿಲ್ಲೆಯ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸ್ಫೋಟ ಸಂಭವಿಸಿದ ನಂತರ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.

ಮೃತ ಮೂವರನ್ನು 65 ವರ್ಷದ ಜಮುನಾ ದಾಸ್, ಆಕೆಯ ಮಗಳು ಪಂಪಾ ಘಾಟಿ ಮತ್ತು ಆಕೆಯ 10 ವರ್ಷದ ಮೊಮ್ಮಗಳು ಜಯಶ್ರೀ ಎಂದು ಗುರುತಿಸಲಾಗಿದೆ. ಆದಾಗ್ಯೂ, ಸ್ಫೋಟದಲ್ಲಿ ಗಾಯಗೊಂಡವರ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಾಗಿಲ್ಲ. ಮೇ 16 ರಂದು ಪುರ್ಬಾ ಮೇದಿನಿಪುರ ಜಿಲ್ಲೆಯ ಮತ್ತೊಂದು ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ನಡೆದ ಮೊದಲ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದರು.