ಮನೆಯ ಜಗುಲಿಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ.! ಗ್ರಾಮಸ್ಥರಲ್ಲಿ ಆತಂಕ.!

ಭಟ್ಕಳ: ತಾಲೂಕಿನ ನೂಜ್ ಕೆಕ್ಕೊಡನಲ್ಲಿ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ. ದುರ್ಗು ಮರಾಠಿ (37) ಚಿರತೆ ದಾಳಿಗೆ ಒಳಗಾದ ವ್ಯಕ್ತಿ.

ತಮ್ಮ ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದುರ್ಗು ಮರಾಠಿಯ ಕೈ ಕಚ್ಚಿ ಗಾಯಗೊಳಿಸಿದೆ. ವ್ಯಕ್ತಿಯು ಚೀರಿಕೊಂಡಿದ್ದು, ಜನರು ಬರುತ್ತಿರುವಂತೆ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ. ಸದ್ಯ ವ್ಯಕ್ತಿ ಚಿರತೆಯ ದಾಳಿಯಿಂದ ಪಾರಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿರತೆಯ ದಾಳಿಯಿಂದ ನೂಜ್ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು, ಇಷ್ಟು ದಿನ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ವನ್ಯ ಜೀವಿಗಳು ಮಾನವನ ಮೇಲೆ ದಾಳಿ ಮಾಡಲು ಆರಂಭಿಸಿದೆ. ಕೂಡಲೆ ಅರಣ್ಯ ಇಲಾಖೆ ನಿಗಾವಹಿಸಬೇಕು. ಗ್ರಾಮಕ್ಕೆ ಬರುವ ಕ್ರೂರ ಮೃಗಗಳನ್ನು ಸೆರೆ ಹಿಡಿದು ದೂರ ಬೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಆರ್‌ಎಫ್‌ಒ ಶರತ ಶೆಟ್ಟಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.