ಭಟ್ಕಳ ತಲುಪಿದ ಮಧ್ಯಪ್ರದೇಶದ ಆಶಾ ಮಾಲ್ವಿ ಒಬ್ಬಂಟಿ ಸೈಕಲ್ ಯಾತ್ರೆ.! ತಾಲೂಕಾಢಳಿತದಿಂದ ಸ್ವಾಗತ

ಭಟ್ಕಳ: ಭಾರತದ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿಯೊಂದಿಗೆ ಯುವತಿಯೊಬ್ಬಳು ಒಬ್ಬಂಟಿಯಾಗಿ ಸೈಕಲ್ ಯಾತ್ರೆ ಆರಂಭಿಸಿ ಮಂಗಳವಾರ ರಾತ್ರಿ ಭಟ್ಕಳ ತಲುಪಿದ್ದು, ಯುವತಿಯನ್ನು ತಾಲೂಕಾಢಳಿತದಿಂದ ಸ್ವಾಗತಿಸಲಾಯಿತು.

ಯುವತಿಗೆ ಭಟ್ಕಳ ಪ್ರವಾಸಿ ಮಂದಿರದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಯಿತು. ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಆಶಾ ಮಾಲ್ವಿ ಒಬ್ಬಂಟಿಯಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದು, ಈ ಮೂಲಕ ಭಾರತ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ನಿರೂಪಿಸಲು ಭಾರತ ಸೈಕಲ್ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಿಂದ ನ. 1 ರಿಂದ ಯಾತ್ರೆ ಆರಂಭಿಸಿರುವ ಯುವತಿ 20 ಸಾವಿರ ಕಿ.ಮೀ ಸೈಕಲ್ ಮೂಲಕ ಪ್ರಯಾಣಿಸುವ ಗುರಿ ಹೊಂದಿದ್ದಾಳೆ. ಈಗಾಗಲೇ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾ ಮಾರ್ಗವಾಗಿ 37 ಸಾವಿರ ಕಿ.ಮೀ ಕ್ರಮಿಸಿ ಕರ್ನಾಟಕದ  ಪ್ರವೇಶಿಸಿ ಭಟ್ಕಳ ತಲುಪಿದ್ದಾಳೆ.

ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯರಿಗೆ ದೇಶದಲ್ಲಿ ಸುರಕ್ಷತೆಯಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ. ಆದರೆ ಇಲ್ಲಿನ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿಯೊಂದಿಗೆ ಸೈಕಲ್ ಯಾತ್ರೆ ಕೈಗೊಂಡಿರುವುದಾಗಿ ಆಶಾ ಮಾಲ್ವಿ ತಿಳಿಸಿದರು.

ಪ್ರತಿನಿತ್ಯ ಯಾವ ಸ್ಥಳಕ್ಕೆ ತೆರಳಬೇಕು ಎನ್ನುವ ಗುರಿಯೊಂದಿಗೆ ಸುಮಾರು 70 ರಿಂದ 150 ಕಿ.ಮೀ ವರೆಗೆ ಸೈಕಲ್ ತುಳಿಯುತ್ತೇನೆ. ಬಳಿಕ ಅಲ್ಲಿನ ಯಾತ್ರಿ ನಿವಾಸಗಳಲ್ಲಿ ವಸತಿ ಮಾಡಿ ಪ್ರಯಾಣ ಮುಂದುವರಿಸುತ್ತೇನೆ. ಊಟ ತಿಂಡಿ ಎಲ್ಲವೂ ಸ್ವಂತ ಕರ್ಚಿನಲ್ಲಿ ಮಾಡುತ್ತಿದ್ದರು, ಕೆಲವರು ಧನಸಹಾಯ ಮಾಡಿದ್ದಾರೆ. ಹೀಗೆ ತೆರಳುವಾಗ ಶಾಲಾ-ಕಾಲೇಜುಗಳಿಗೆ ತೆರಳಿ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿರುವ ಬಗ್ಗೆ ಮತ್ತು ಮಹಿಳೆಯರ ರಕ್ಷಣೆ ಬಗ್ಗೆ ಭಾರತ ಹೊಂದಿರುವ ಕಾಳಜಿ ಬಗ್ಗೆ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದರು.
ಇನ್ನು ಯಾತ್ರೆಯನ್ನು ದೆಹಲಿಯಲ್ಲಿ ಪೂರ್ಣಗೊಳಿಸಲಿದ್ದು, ಯಾತ್ರೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ರಾಷ್ಟಪತಿ ದ್ರೌಪದಿ ಮುರ್ಮು ಭೇಟಿಯಾಗಬೇಕೆಂಬ ಬಯಕೆ ಇದೆ ಎಂದು ಆಶಾ ಮಾಲ್ವಿ ತಿಳಿಸಿದ್ದಾರೆ.

ಪ್ರವಾಸಿ ಮಂದಿರಕ್ಕೆ ತಹಶೀಲ್ದಾರ್ ಸುಮಂತ ಬಿ. ಯುವತಿಯನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದರು.

ಈ ಸಂದರ್ಭದಲ್ಲಿ ಪಿ.ಎಸ್.ಐ ಗಳಾದ ಸುಮಾ ಆಚಾರ್ಯ, ಹನುಮಂತಪ್ಪ ಕುಡಗುಂಟಿ, ಯಲ್ಲಪ್ಪ ಮಾದರ್, ಕಂದಾಯ ನಿರೀಕ್ಷಕ ಕೆ.ಶಂಭು ಉಪಸ್ಥಿತರಿದ್ದರು