ದೀಪಾವಳಿ ಮುಗಿದರೂ ರಾಜಧಾನಿಯಲ್ಲಿ ನಿಲ್ಲದ ಪಟಾಕಿ ಅವಘಡ.!!

ಬೆಂಗಳೂರು: ಈ ಬಾರಿ ಪಟಾಕಿ ಅವಘಡದಿಂದ ಆಸ್ಪತ್ರೆ ಸೇರಿದ ಸಂಖ್ಯೆ ಗರಿಷ್ಠ ಮಟ್ಟ ತಲುಪಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ವರೆಗೂ ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಪಟಾಕಿ ಸಿಡಿಸುವವರ ಜೊತೆಗೆ ವೀಕ್ಷಿಸಿದ ಅನೇಕ ಮಂದಿಗೆ ಪಟಾಕಿ ಎಫೆಕ್ಟ್ ಆಗಿದೆ.

ಮಿಂಟೋ ಆಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದ್ದು ಮೂರು ವರ್ಷದ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಈ ಬಾರಿ ಆಗಿದೆ. ಪಟಾಕಿ ಬಗ್ಗೆ ಜಾಗೃತಿ ಮೂಡಿಸಿದರೂ ಅವಘಡಗಳು ಮಾತ್ರ ನಿಂತಿಲ್ಲ. ಕೆಲವರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿಯನ್ನು ಕಳೆದುಕೊಂಡ ಘಟನೆಗಳು ವರದಿಯಾಗಿವೆ. ಈ ಬಾರಿ 5 ಮಂದಿಗೆ ಗಂಭೀರ ಗಾಯಗಳಾಗಿ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇನ್ನು 18 ಮಂದಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮಿಂಟೊ ಆಸ್ಪತ್ರೆಯಲ್ಲಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದ 40 ಮಂದಿಯಲ್ಲಿ 21 ಮಂದಿ ಪಟಾಕಿ ಸಿಡಿಸದವರಾಗಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಚಲಿಸುವ ವೇಳೆ ವೀಕ್ಷಿಸುವಾಗ 33 ಜನ ಗಾಯಗೊಂಡಿದ್ದಾರೆ. ಈ ಬಗ್ಗೆ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಮಾಹಿತಿ ನೀಡಿದ್ದಾರೆ.