ಬೆಂಗಳೂರಿನ 40 ಇಂದಿರಾ ಕ್ಯಾಂಟೀನ್ ಕ್ಲೋಸ್.! ಬಡವರ ಹೊಟ್ಟೆಗೆ ಬರೆ ಎಳೆದ ಸರ್ಕಾರ.! ಯಾಕೀ ತಾತ್ಸಾರ.?

ಬೆಂಗಳೂರು: ಬಡವರ ಹಸಿವು ನೀಗಿಸಉವ ಇಂದಿರಾ ಕ್ಯಾಂಟೀನ್ ಯೋಜನೆ ಬಗ್ಗೆ ಬಿಜೆಪಿ ಸರ್ಕಾರ ಯಾಕೆ ನಿರ್ಲಕ್ಷ ತೋರುತ್ತಿದೆ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ಹೌದು.! ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಇಂದೀರಾ ಕ್ಯಾಂಟೀನ್ ಯೋಜನೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಳ್ಳು ನೀರು ಬಿಟ್ಟಿದೆ.

ಬೆಂಗಳೂರಿನ 198 ವಾರ್ಡುಗಳಲ್ಲೂ ಕ್ಯಾಂಟೀನ್ ತೆರೆಯುವ ಗುರಿ ಸರ್ಕಾರ ಹೊಂದಿತ್ತು. ಆದರೆ ಎಷ್ಟೋ ವಾರ್ಡುಗಳಲ್ಲಿ ತೆರೆಯಲೇ ಇಲ್ಲ. ಇನ್ನು ಈ ಪೈಕಿ 40 ಇಂದಿರಾ ಕ್ಯಾಂಟೀನ್​ಗಳನ್ನು ಆರ್ಥಿಕ ಕಾರಣವೊಡ್ಡಿ ಮುಚ್ಚಲಾಗಿದೆ. ಆರ್ ಆರ್ ನಗರ ವಲಯದಲ್ಲಿ ಒಟ್ಟು 8 ಕ್ಯಾಂಟೀನ್​ಗಳನ್ನು ಕ್ಲೋಸ್ ಮಾಡಲಾಗಿದೆ. ಬಿಬಿಎಂಪಿಯಿಂದ ಸಬ್ಸಿಡಿ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎನ್ನುವ ಕಾರಣವನ್ನು ನೀಡಿ ಸಾಕಷ್ಟು ಕಡೆ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ.

ಪಾರ್ವತಿಪುರ, ಸಂಪಿಗೆ ರಾಮನಗರ, ಬಿಸ್ಮಿಲ್ಲಾನಗರದ ಟ್ಯಾಂಕ್‌ಬಂಡ್‌ ರಸ್ತೆ, ಹೊಸಹಳ್ಳಿ, ಪುಲಿಕೇಶಿ ನಗರ, ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದರ ಪಾಳ್ಯ, ಸುಬ್ರಮಣ್ಯಪುರಂನ ವಸಂತನಗರ, ಮಹದೇವಪುರದ ಎ. ನಾರಾಯಣಪುರ, ಕೋಗಿಲು, ಪ್ರಕೃತಿನಗರ ಸೇರಿದಂತೆ 40 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್​ಗಳನ್ನು ಮುಚ್ಚಲಾಗಿದೆ.

ನಗರದ 198 ವಾರ್ಡ್‌ಗಳಲ್ಲೂ ತಲಾ ಒಂದು ಇಂದಿರಾ ಕ್ಯಾಂಟೀನ್‌ ತೆರೆಯಲು ಯೋಜನೆ ರೂಪಿಸಲಾಗಿತ್ತು. ಇಂದಿರಾ ಕ್ಯಾಂಟೀನ್ ಗ್ರಾಹಕರ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎನ್ನಲಾಗಿದೆ. ಮೊದಲು ದಿನ ನಿತ್ಯ 3.5 ಲಕ್ಷ ಮಂದಿ ಪ್ರತಿದಿನ ಕ್ಯಾಂಟೀನ್ ಗೆ ಬರುತ್ತಿದ್ದರು. ಇದೀಗ ಅದರ ಸಂಖ್ಯೆ 1.5 ಲಕ್ಷಕ್ಕೆ ಇಳಿಕೆಯಾಗಿದೆ.