‘ಪತ್ರಕರ್ತರಿಗೆ ಗಿಫ್ಟ್’ ಸಿಎಂ ಹೇಳಿದ್ದೇನು.?

ಬೆಂಗಳೂರು: ಪತ್ರಕರ್ತರಿಗೆ ಉಡುಗೊರೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಕರ್ತರಿಗೆ ಉಡುಗೊರೆ ನೀಡುವಂತೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಲೋಕಾಯುಕ್ತ ತನಿಖೆ ಆಗಲಿ ಎಂದು ಅವರು ಹೇಳಿದರು.

ಕಾಂಗ್ರೆಸ್​ ಪಕ್ಷ ಸುಳ್ಳು ಸುದ್ದಿ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಪತ್ರಕರ್ತರಿಗೆ ಗಿಫ್ಟ್​ ಕೊಡಿ ಎಂದು ನಾನು ಯಾರಿಗೂ ಸೂಚಿಸಿಲ್ಲ. ಇದು ಕಾಂಗ್ರೆಸ್​​ ಟೂಲ್​ ಕಿಟ್​​ನ ಮುಂದುವರಿದ ಭಾಗ. ಕಾಂಗ್ರೆಸ್ ಅವಧಿಯಲ್ಲಿ ಐ ಫೋನ್​, ಚಿನ್ನದ ನಾಣ್ಯ ನೀಡಿದ್ದರು. ಈಗ ಆರೋಪ ಮಾಡಲು ಕಾಂಗ್ರೆಸ್​ಗೆ ಯಾವ ನೈತಿಕತೆ ಇದೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.

ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು, ತನಿಖೆಯಾಗುತ್ತದೆ. ಇದರ ಅರ್ಥ ಎಲ್ಲ ಪತ್ರಕರ್ತರು ಉಡುಗೊರೆ ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಕಾಂಗ್ರೆಸ್ ವಕ್ತಾರ ಬಹಳ ಕೆಟ್ಟದಾಗಿ ಅದನ್ನು ವ್ಯಾಖ್ಯಾನ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ ಎಂದರು.