ಶಾಲಾ ಮಕ್ಕಳಿಗೆ ದಸರಾ ರಜೆ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ: ರಜೆ ಕಡಿತಕ್ಕೆ ಬೇಸರ

ಬೆಂಗಳೂರು: ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪತ್ರ ಬರೆದು ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ಅ.31ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದೆ.

ಈ ಬಾರಿ ಸರ್ಕಾರ ಮಧ್ಯಂತರ ರಜೆಯನ್ನು ಅ.3 ರಿಂದ ಅ.17ರ ವರೆಗೆ ನಿಗದಿಪಡಿಸಿತ್ತು. ಆದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರಜೆಗಳನ್ನು ನೀಡಲಾಗಿದೆ. ಪ್ರತಿವರ್ಷ ಈ ಮಧ್ಯಂತರ ರಜೆಯನ್ನು ಅ.3- 31ರ ವರೆಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ರಜೆಯನ್ನು ಕಡಿತಗೊಳಿಸಿದ್ದು, ಮಕ್ಕಳಲ್ಲಿ ತೀವ್ರ ನಿರಾಸೆಯನ್ನು ಉಂಟು ಮಾಡಿದೆ ಎಂದು ಸಂಘದ ಅಧ್ಯಕ್ಷ ಶಂಭುಲಿಂಗಗೌಡ ಪಾಟೀಲ ಪತ್ರದಲ್ಲಿ ವಿವರಿಸಿದ್ದಾರೆ.

ಇನ್ನು ಈ ಬಾರಿ 15 ದಿನಗಳ ಮುಂಚಿತವಾಗಿ ಶಾಲೆಗಳನ್ನು ಪ್ರಾರಂಭಿಸಿದ್ದು, ದಸರಾ ರಜೆಯನ್ನೂ ಕಡಿತಗೊಳಿಸಲಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.