41 ಗಂಟೆಯಲ್ಲಿ 2700 ಕಿ.ಮೀ ತಲುಪಿದ ಆಂಬ್ಯುಲೆನ್ಸ್.! ಚಾಲಕ ಅನಿಲ್ ರೂಬನ್ ಸಾಹಸಕ್ಕೆ ಎಲ್ಲೆಡೆ ಶ್ಲಾಘನೆ.!

ಮಂಗಳೂರು: ಮೂಡಬಿದ್ರೆಯಿಂದ ಉತ್ತರ ಪ್ರದೇಶಕ್ಕೆ ಕೇವಲ 41 ಗಂಟೆಗಳಲ್ಲಿ 2700 ಕಿ.ಮೀ ಕ್ರಮಿಸಿ ರೋಗಿಯನ್ನ ಸುರಕ್ಷಿತವಾಗಿ ಮುಟ್ಟಿಸಿ ಆ್ಯಂಬುಲೆನ್ಸ್ ಚಾಲಕ ಅನಿಲ್ ರೂಬನ್ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ಮುರಾದಾಬಾದ್ ನಿವಾಸಿ ಮಹಾಂದಿ ಹಸನ್, ಮೂಡಬಿದ್ರೆಯ ಮಾಸ್ತಿಕಟ್ಟೆಯ ಅಡಿಕೆ ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ.ಈ ವೇಳೆ ಹಸನ್ ಆಕಸ್ಮಿಕವಾಗಿ ಬಿದ್ದು ಕೋಮಾಕ್ಕೆ ಹೋಗಿದ್ದ. ಹೀಗಾಗಿ ಆತನ ಕುಟುಂಬ ಮುರಾದಾಬಾದ್​​ಗೆ ಕರೆಸಿಕೊಳ್ಳಲು ಬಯಸಿದ್ದರು. ಗೋದಾಮಿನ ಮಾಲೀಕರು ವಿಮಾನದ ಮೂಲಕ ಸಾಗಿಸಲು ವ್ಯವಸ್ಥೆ ಮಾಡಿದ್ದರಾದರೂ ವೈದ್ಯರು, ದಾದಿಯರಿಲ್ಲದ ಕಾರಣ ಹಸನ್ ನನ್ನು ಕೊಂಡೊಯ್ಯಲು ವಿಮಾನ ಸಂಸ್ಥೆ ನಿರಾಕರಿಸಿದೆ.

ಇದರ ಹಿನ್ನೆಲೆ ಮೆಂಡೋನ್ಸಾ ಮಾಲೀಕತ್ವದ ಆಂಬ್ಯುಲೆನ್ಸ್ ಮೂಲಕ ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂಸ್ಥೆಯು ಚಾಲಕ ಅನಿಲ್ ರೂಬನ್ ಮತ್ತು ಇನ್ನೊಬ್ಬ ಚಾಲಕನನ್ನು ಜೊತೆಯಾಗಿ ಉತ್ತರ ಪ್ರದೇಶಕ್ಕೆ ತೆರಳಲು ಸಿದ್ದರಾಗಿದ್ದರು. ಅದರಂತೆ ಸೆ. 10 ರಂದು ಮಹಾಂದಿ ಹಸನ್ ನನ್ನು ಆ್ಯಂಬುಲೆನ್ಸ್​ನಲ್ಲಿ ಇಟ್ಟುಕೊಂಡು ಮೂಡಬಿದ್ರೆಯಿಂದ ಉತ್ತರ ಪ್ರದೇಶಕ್ಕೆ ಹೊರಟು ಸೆ. 12 ರ ಮುಂಜಾನೆ 10:30 ರ ಸುಮಾರಿಗೆ ಮುರಾದಾಬಾದ್​ ತಲುಪಿದ್ದಾರೆ. ನಂತರ ಕುಟುಂಬಸ್ಥರು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಅನಿಲ್ ರೂಬನ್ ನ ಈ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.