ಪೆಟ್ರೋಲ್, ಡೀಸೆಲ್‌ ಬದಲು ಪರ್ಯಾಯ ಇಂಧನ ಬಳಕೆಗೆ ಒತ್ತು: ಗಡ್ಕರಿಯಿಂದ ಇವಿ ಕ್ರಾಂತಿಯ ಸೂಚನೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಕಾರುಗಳ ಮಾರಾಟ ಕಡಿಮೆ ಮಾಡಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಪರ್ಯಾಯ ಇಂಧನಗಳಿಗೆ ಆದ್ಯತೆ ನೀಡಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಅವರು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ನ 62 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಕಾರ್ಯತಂತ್ರಗಳ ಬಗ್ಗೆ ಸಂಶೋಧಿಸಲು ಎಸ್ಐಎಎಂ ಅಲ್ಲಿ ಗಡ್ಕರಿ ವಿನಂತಿಸಿದ್ದಾರೆ. ಎಲೆಕ್ಟ್ರಿಕ್ ವೆಹಿಕಲ್ ವ್ಯವಹಾರವನ್ನು ಬೆಳೆಸಲು ಮತ್ತು ಬಸ್ಸುಗಳು, ದ್ವಿಚಕ್ರ, ಮೂರು ಮತ್ತು ನಾಲ್ಕು ಚಕ್ರದ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಇದು ಸಕಾಲ. ಭಾರತವನ್ನು ಪರ್ಯಾಯ ಇಂಧನ ವಾಹನಗಳ ಅಗ್ರ ಉತ್ಪಾದಕನನ್ನಾಗಿ ಮಾಡಲು ಬಯಸುತ್ತೇನೆ. ಅಲ್ಲದೇ ವಿದ್ಯುತ್ ಹೆದ್ದಾರಿಯನ್ನು ಪ್ರಾರಂಭಿಸುವ ಕನಸು ಕಂಡಿದ್ದೇನೆ ಎಂದು ಹೇಳಿದರು.

ಗಡ್ಕರಿ ಅವರು 27 ಹಸಿರು ಎಕ್ಸ್ ಪ್ರೆಸ್ ವೇಗಳನ್ನು ನಿರ್ಮಿಸಲು ಶಿಫಾರಸ್ಸು ಮಾಡಿದ್ದಾರೆ. ಇದರಿಂದ ದೆಹಲಿಯಿಂದ ಮುಂಬೈಗೆ ಪ್ರಸ್ತುತ 52 ಗಂಟೆಗಳ ಪ್ರಯಾಣವು ಕೇವಲ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.