ಪಾಳು ಬಿದ್ದ ಕಲ್ಲುಕ್ವಾರಿಯಲ್ಲಿ ಈಜಲು ಹೋದ ಯುವಕ ಸಾವು.!

ಭಟ್ಕಳ: ಹಲವಾರು ವರ್ಷಗಳಿಂದ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ವೇಳೆ ಯುವಕನೊರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿರಾಲಿ ನೀಲಕಂಠದ ಹುಲ್ಲುಕ್ಕಿಯಲ್ಲಿ ನಡೆದಿದೆ. ಮೃತ ಯುವಕ ಜುಬೇರ್ ಇರ್ಶಾದ್ ಅಲಿಅಕ್ಬರ್ ಕಾರಗದ್ದೆ ನಿವಾಸಿ ಎಂದು ತಿಳಿದು ಬಂದಿದೆ.

ಈತ ತನ್ನ ಸ್ನೇಹಿತರೊಂದಿಗೆ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ವೇಳೆ ಈ ದುರ್ಘಟನೆ ನಡೆದಿದೆ. ಅನೇಕ ವರ್ಷದಿಂದ ಶಿಲೆ ಕಲ್ಲು ಕ್ವಾರಿ ನಡೆಸಿ ಸದ್ಯ ಖಾಲಿ ಇರುವ ಈ ಸ್ಥಳದಲ್ಲಿ ಮಳೆ ನೀರು ತುಂಬಿ ಹೊಳೆಯಂತಾಗಿದೆ. ಶುಕ್ರವಾರದ ರಜೆಯ ದಿನವನ್ನು ಕಳೆಯಲು ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಯುವಕ ನೀರಿನಲ್ಲಿ ಮುಳುಗಿರುವ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ಬಂದು ಮೃತ ದೇಹ ಪತ್ತೆ ಹಚ್ಚಲು ಸಹಕರಿಸಿದರು. ಅಂತಿಮವಾಗಿ ಸಾವನ್ನಪ್ಪಿದ ಯುವಕರ ಮೃತ ದೇಹ ಪತ್ತೆ ಹಚ್ಚುವಲ್ಲಿ ಅಲ್ಲಿನ ಸ್ಥಳೀಯ ಯುವಕರು ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಸುಮಂತ ಬಿ, ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್ ನಾಯಕ, ಭಟ್ಕಳ ಅಗ್ನಿಶಾಮಕ ದಳ, ಎಸ್.ಡಿ.ಆರ್.ಆಫ್ ತಂಡ ಹಾಗೂ ಮಾವಳ್ಳಿ ಕಂದಾಯ ನಿರೀಕ್ಷಕರಾದ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕ ಹೇಮಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು