ಅ. 1 ರಂದು ಭಟ್ಕಳದಲ್ಲಿ ಸೂಪರ್ ಸ್ಪೆಷಾಲಿಟಿ ಆರೋಗ್ಯ ತಪಾಸಣೆ ಶಿಬಿರ.!

ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅ. 1 ರಂದು ಸುರತ್ಕಲ್ಲಿನ ಶ್ರೀನಿವಾಸ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಮೊದಲ ಬಾರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಭಟ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಅಕ್ಟೋಬರ್ 1 ರಂದು ಬೆಳಿಗ್ಗೆ 9 ಘಂಟೆಯಿಂದ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುವುದು ಎಂದರು. ಇತ್ತೀಚಿಗೆ ಹೃದಯ ರೋಗಕ್ಕೆ ಯುವಪೀಳಿಗೆ ಬಲಿಯಾಗುತ್ತಿದ್ದು, ಜಾಗೃತಿ ಮೂಡಿಸುವ ಹಾಗೂ ತಪಾಸಣೆ ನಡೆಸಲು ಹಿರಿಯ ಹೃದಯರೋಗ ತಜ್ಞ ಎಂ. ಸುಬ್ರಹ್ಮಣ್ಯ ಬರಲಿದ್ದಾರೆ. ಈ ಶಿಬಿರದಲ್ಲಿ ಕ್ಯಾನ್ಸರ್ ರೋಗ ಅದರಲ್ಲೂ ಮುಖ್ಯವಾಗಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು. ರೋಗ ಪತ್ತೆಯಾದರೆ ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಸಲಾಗುವುದು ಎಂದರು.