ಮುಸ್ಲಿಂ ಪೊಲೀಸ್ ಅಧಿಕಾರಿಯ ಗಣೇಶ ಪ್ರೇಮ.! ಭಾವೈಕ್ಯತೆಯ ಸಂದೇಶ ಸಾರಿದ ಇನ್ಸ್ ಪೆಕ್ಟರ್ ಮಹಮ್ಮದ್ ರಫೀಕ್.!

ಬೆಳಗಾವಿ: ರಾಜ್ಯದಲ್ಲಿ ಜಾತಿ ಧರ್ಮದ ದಂಗಲ್ ಜೋರಾಗಿರುವಾಗಲೇ ಭಾವೈಕ್ಯತೆಯ ಸಂದೇಶ ಸಾರುವ ಅಪರೂಪದ ಘಟನೆಗೆ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಠಾಣೆಯ ಇನ್ಸ್ ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್ ಮುಸ್ಲಿಂ ಧರ್ಮದವರಾಗಿದ್ದರೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.‌

ಧರ್ಮದ ಕಟ್ಟುಪಾಡು ಬಿಟ್ಟು ಹಣೆಗೆ ತಿಲಕವಿಟ್ಟು, ತಲೆಗೆ ಕೇಸರಿ ಟೋಪಿ ಹಾಕಿ ಕೇಸರಿ ಶಾಲು ಹಾಕಿ ಠಾಣೆಯ ಸಿಬ್ಬಂದಿಗಳೊಂದಿಗೆ ಗಣೇಶನಿಗೆ ಮಂಗಳರಾತಿ ಹಾಡು ಹೇಳಿ ಸಾಮರಸ್ಯರ ಸಂದೇಶ ಸಾರಿದ್ದಾರೆ. ಇದುವರೆಗೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುವ ವಾಡಿಕೆ ಇರಲಿಲ್ಲ. ಆದರೆ ಮುಸ್ಲಿಂ ಧರ್ಮದ ಇನ್ಸ್ ಪೆಕ್ಟರ್ ಮಹಮ್ಮದ್ ರಫೀಕ್ ಅವರು ಹೊಸದಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿದೆ. ಇನ್ಸ್ ಪೆಕ್ಟರ್ ಅವರ ಈ ಕಾರ್ಯಕ್ಕೆ ಹುಕ್ಕೇರಿಯ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.