ಮಳಗಿ ವ್ಯವಸಾಯ ಸೇವಾ ಸಹಕಾರಿ ಸಂಘ ದರೋಡೆ.! ಕಾವಲುಗಾರನನ್ನು ಕಟ್ಟಿ ಹಾಕಿ ಹಣ, ಒಡವೆ ದೋಚಿದ ಮುಸುಕುಧಾರಿಗಳು.!

ಮುಂಡಗೋಡ: ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದರೋಡೆ ಮಾಡಿರುವ ಘಟನೆ ನಡೆದಿದೆ. ಬಾಗಿಲು ಮುರಿದು ಹಣ ಹಾಗೂ ಬಂಗಾರದ ಒಡವೆಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮಳಗಿ ಪಂಚಾಯತ್ ವ್ಯಾಪ್ತಿಯ ರೈತರು ವ್ಯವಹಾರ ನಡೆಸುವ ಸಹಕಾರಿ ಸಂಘದಲ್ಲಿ ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಆರು ಜನ ಮುಸುಕುಧಾರಿ ಕಳ್ಳರ ತಂಡ‌ ಕಾವಲುಗಾರ ಮಾದೇವಪ್ಪ ತಳವಾರ (72) ಎಂಬವರನ್ನು ಹೊಡೆದು ಕಟ್ಟಿ ಹಾಕಿ ಕಳ್ಳತನ ಮಾಡಿದ್ದಾರೆ.

ಸೊಸೈಟಿಯ ಹಿಂಬದಿಯಿಂದ ಒಳ ನುಗ್ಗಿದ್ದ ಕಳ್ಳರು ಗ್ಯಾಸ್ ಕಟ್ಟರ್ ನಿಂದ ಕಬ್ಬಿಣದ ಬಾಗಿಲು ಕಟ್‌ ಮಾಡಿ ಸೊಸೈಟಿ ಒಳ ಹೊಕ್ಕಿದ್ದಾರೆ. ನಂತರ ಕಬ್ಬಿಣದ ಕಪಾಟುಗಳನ್ನು ಕಟ್ ಮಾಡಿ ಬಂಗಾರ ಹಾಗೂ ಹಣವನ್ನು ಕದ್ದು, ನಸುಕಿನ ಜಾವ 4 ಗಂಟೆ ಅಂದಾಜಿಗೆ ಸೊಸೈಟಿಯಿಂದ ಹೋಗಿದ್ದಾರೆಂದು ಕಾವಲುಗಾರ ಮಾಹಿತಿ ನೀಡಿದ್ದಾನೆ.

ಈ ಹಿಂದೆಯೂ ಸೊಸೈಟಿ ಕಳ್ಳತನಕ್ಕೆ ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ್ದರು. ರೈತರು ಹಾಗೂ ಸಾರ್ವಜನಿಕರು ಈ ಸೊಸೈಟಿಯಲ್ಲಿ ಭಾರೀ ಪ್ರಮಾಣದ ಆಭರಣಗಳನ್ನು ಅಡವಿಟ್ಟಿದ್ದರು ಎನ್ನಲಾಗಿದೆ. ಕಳ್ಳತನದ ಸುದ್ದಿ ತಿಳಿದು ಬಂಗಾರ ಅಡವಿಟ್ಟ ಜನರು ಸೊಸೈಟಿಯತ್ತ ಧಾವಿಸುತ್ತಿದ್ದಾರೆ. ಸ್ಥಳಕ್ಕೆ ಮುಂಡಗೋಡ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಘಟನಾ ಸ್ಥಳಕ್ಕೆ ಆಗಮಿಸಿದೆ.