ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಮುತಾಲಿಕ್ ಹೇಳಿದ್ದೇನು.?

ಧಾರವಾಡ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಅನುಮತಿ ವಿಚಾರವಾಗಿ ಕೋರ್ಟ್ ಬಹಳ ಒಳ್ಳೆಯ ನಿರ್ಣಯ ಕೊಟ್ಟಿದೆ. ಇದರಿಂದ ಹಿಂದೂಗಳಿಗೆ ಸಂತಸವಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿದ್ದಾರೆ.

ಧಾರವಾಡದಲ್ಲಿ ಪ್ರಮೋದ ಮುತಾಲಿಕ್ ಪ್ರತಿಕ್ರಿಯೆ ನೀಡಿ, ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಗಣೇಶೋತ್ಸವಕ್ಕೆ ಅನುಕೂಲ ಮಾಡುತ್ತಾರೆಂಬ ವಿಶ್ವಾಸವಿದೆ. ಅಲ್ಲದೇ ಹುಬ್ಬಳ್ಳಿಯ ಮೈದಾನದಲ್ಲಿಯೂ ಅನುಮತಿ ಕೇಳಲಾಗಿದೆ. ಅದಕ್ಕಾಗಿ ಸಮಿತಿ ಮಾಡುವಂತೆ ನಾನು ಕೂಡಾ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಅಲ್ಲದೇ ನಾನು ಕೂಡ ಡಿಜೆ ವಿರೋಧೀನೆ. ಆದರೆ‌ ಡಿಜೆಗೆ ಮಾತ್ರ ಸುಪ್ರೀಂ ಕೊರ್ಟ್ ಆದೇಶ ಲಿಂಕ್ ಮಾಡುತ್ತಿದ್ದಾರೆ. ಮಸೀದಿಯಲ್ಲಿ ನಮಾಜ್ ಮಾಡಿ ಶಬ್ದ ಮಾಲಿನ್ಯ ಆಗುತ್ತಿರುವುದರ ವಿರುದ್ಧ ಯಾವುದೇ ಕ್ರಮ‌ಕೈಗೊಂಡಿಲ್ಲ. ವರ್ಷಕ್ಕೆ ಒಮ್ಮೆ ಬರುವ ಗಣೇಶ ಹಬ್ಬದಲ್ಲಿ ಮಾತ್ರ ಡಿಜೆಗೆ ನೋಟಿಸ್ ನೀಡ್ತಾರೆ. ಇದು ಸರಿಯಲ್ಲ. ಡಿಜೆ ಹಚ್ಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ಒಂದು ವೇಳೆ ಪೊಲೀಸರು ಸಿಜ್ ಮಾಡಿದರೆ‌ ಠಾಣೆ ಎದುರೇ ಧರಣಿ ಮಾಡಿ, ನಾನು ನಿಮಗೆ ಸಾಥ್ ಕೊಡ್ತೇನೆ ಎಂದು ಮುತಾಲಿಕ್ ಹೇಳಿದರು.