ಸಿಎಸ್‌ಕೆ ಸೋಲಿಗೆ ರುತುರಾಜ್ ಗಾಯಕ್ವಾಡ್ ಯಾರನ್ನ ದೂರಿದರು ಗೊತ್ತಾ?

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್​ನ 7ನೇ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 209 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್​ಗಳಲ್ಲಿ 210 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

IPL 2026: 

ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 209 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್​ಗಳಲ್ಲಿ 210 ರನ್​ಗಳಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸಿಎಸ್​ಕೆ ತಂಡವು ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಸೋಲನುಭವಿಸಿದಂತಾಗಿದೆ.

ಈ ಸೋಲಿನ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ನಮ್ಮ ತಂಡವು ಕಲೆಹಾಕಿದ ಮೊತ್ತವು ಆ ಪಿಚ್‌ಗೆ ಅತ್ಯುತ್ತಮವಾಗಿತ್ತು. “ನನ್ನ ಪ್ರಕಾರ ಇದು ನಿಜಕ್ಕೂ ಒಂದು ಒಳ್ಳೆಯ ಸ್ಕೋರ್. ವಿಕೆಟ್ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿದ್ದರೂ, ಸ್ಪಿನ್ನರ್‌ಗಳಿಗೂ ಚೆಂಡು ಸ್ವಲ್ಪ ಗ್ರಿಪ್ ನೀಡುತ್ತಿತ್ತು. ಮೈದಾನದ ಬೌಂಡರಿಗಳು ದೊಡ್ಡದಾಗಿದ್ದರಿಂದ, ಈ ಮೊತ್ತವನ್ನು ರಕ್ಷಿಸಿಕೊಳ್ಳಬಹುದು ಎಂಬ ನಂಬಿಕೆ ನನಗಿತ್ತು.

ಆದರೆ ನಮ್ಮ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಸೋಲಿಗೆ ಪ್ರಮುಖವಾಗಿ ಬೌಲಿಂಗ್ ವಿಭಾಗದ ಹಿನ್ನಡೆಯೇ ಕಾರಣ. ತಂಡವು ಮೂವರು ವೇಗಿಗಳು ಮತ್ತು ಇಬ್ಬರು ಪ್ರತಿಭಾವಂತ ರಿಸ್ಟ್ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಪವರ್‌ಪ್ಲೇ ನಂತರ ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, “ಇಬ್ಬರೂ ಸ್ಪಿನ್ನರ್‌ಗಳು ಇಂದು ಸರಿಯಾಗಿ ಬೌಲಿಂಗ್ ಮಾಡಿರಲಿಲ್ಲ/ ಅದು ನಮಗೆ ದೊಡ್ಡ ಹೊಡೆತ ನೀಡಿತು,” ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು  ತನ್ನ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ರುತುರಾಜ್ ಗಾಯಕ್ವಾಡ್, ಪಿಚ್‌ನ ಪರಿಸ್ಥಿತಿಗೆ ತಕ್ಕಂತೆ ಆಂಕರ್ ಪಾತ್ರ ವಹಿಸಲು ಬಯಸಿದ್ದಾಗಿ ತಿಳಿಸಿದರು. ಒಂದು ತುದಿಯಲ್ಲಿ ಆಯುಷ್ ವೇಗವಾಗಿ ರನ್ ಗಳಿಸುತ್ತಿದ್ದಾಗ, ನಾನು ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ನಂತರ ದೊಡ್ಡ ಹೊಡೆತಗಳಿಗೆ ಮುಂದಾಗುವ ಯೋಜನೆಯಲ್ಲಿದೆ. ಆದರೆ ದುರದೃಷ್ಟವಶಾತ್ ನನ್ನ ಲೆಕ್ಕಾಚಾರ ತಲೆಕೆಳಗಾಯಿತು ಎಂದರು.

ಒಟ್ಟಾರೆಯಾಗಿ, ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಬೌಲಿಂಗ್ ವಿಭಾಗದಲ್ಲಿ ಶಿಸ್ತು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ನಾಯಕ ರುತುರಾಜ್ ಗಾಯಕ್ವಾಡ್ ಅಭಿಪ್ರಾಯಪಟ್ಟಿದ್ದಾರೆ.