ನವದೆಹಲಿ, ನವೆಂಬರ್ 13: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆಯಲ್ಲಿ ತನಿಖಾಧಿಕಾರಿಗಳಿಗೆ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ. ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ವೈದ್ಯರನ್ನು ಒಳಗೊಂಡ ಶಂಕಿತ ಭಯೋತ್ಪಾದಕ ಘಟಕವು ಡಿಸೆಂಬರ್ 6 ರಂದು ದೆಹಲಿ ಮತ್ತು ಎನ್ಸಿಆರ್ ಪ್ರದೇಶದ ಆರು ಸ್ಥಳಗಳಲ್ಲಿ ಸ್ಫೋಟ ನಡೆಸುವ ಯೋಜನೆ ರೂಪಿಸಿತ್ತು ಎಂಬುದು ಬಹಿರಂಗವಾಗಿದೆ.
ಇದೇ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವಾಗಿದ್ದು, ಆ ಘಟನೆಯ “ಪ್ರತೀಕಾರ” ತೀರಿಸಿಕೊಳ್ಳುವ ಉದ್ದೇಶದಿಂದ ಈ ದಿನಾಂಕ ಆಯ್ಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಶಂಕಿತರು ವಿಚಾರಣೆಯ ವೇಳೆ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಐದು ಹಂತದ ಕಾರ್ಯಯೋಜನೆ ಸಿದ್ಧಪಡಿಸಿದ್ದರು ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಈಗ ಈ ಐದು ಹಂತಗಳ ಯೋಜನೆಯ ವಿವರಗಳನ್ನು ಪತ್ತೆಹಚ್ಚಿದ್ದಾರೆ.

ಹಂತ 1: ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಭಯೋತ್ಪಾದಕ ಮಾಡ್ಯೂಲ್ ರಚನೆ.
ಹಂತ 2: ಸುಧಾರಿತ ಸ್ಫೋಟಕ ಸಾಧನಗಳು ಮತ್ತು ಮದ್ದುಗುಂಡುಗಳ ತಯಾರಿಗಾಗಿ ಅಗತ್ಯವಾದ ಕಚ್ಚಾ ವಸ್ತುಗಳ ಖರೀದಿ — ಇವುಗಳನ್ನು ಹರಿಯಾಣದ ನುಹ್ ಮತ್ತು ಗುರುಗ್ರಾಮ ಪ್ರದೇಶಗಳಿಂದ ಪಡೆಯಲಾಗುತ್ತಿತ್ತು.
ಹಂತ 3: ಮಾರಕ ರಾಸಾಯನಿಕ ಐಇಡಿ ಗಳ ತಯಾರಿಕೆ ಹಾಗೂ ಸಂಭಾವ್ಯ ಗುರಿ ಸ್ಥಳಗಳ ಸುತ್ತ ನಿಗಾವಹಿಸುವುದು.
ಹಂತ 4: ಸ್ಥಳಾವಕಾಶ ಪರಿಶೀಲನೆಯ ನಂತರ, ಮಾಡ್ಯೂಲ್ ಸದಸ್ಯರ ನಡುವೆ ಜೋಡಿಸಲಾದ ಬಾಂಬ್ಗಳನ್ನು ಹಂಚಿಕೆ ಮಾಡುವುದು.
ಹಂತ 5: ದೆಹಲಿಯ ಆರುದಿಂದ ಏಳು ಪ್ರಮುಖ ಸ್ಥಳಗಳಲ್ಲಿ ಸಂಘಟಿತ ಬಾಂಬ್ ದಾಳಿಗಳನ್ನು ಕಾರ್ಯಗತಗೊಳಿಸುವುದು.
ತನಿಖಾಧಿಕಾರಿಗಳ ಪ್ರಕಾರ, ಮೂಲ ಯೋಜನೆ ಈ ವರ್ಷದ ಆಗಸ್ಟ್ನಲ್ಲಿ ದಾಳಿಗಳನ್ನು ನಡೆಸುವದಾಗಿತ್ತು. ಆದರೆ ಕೆಲವು ತಾಂತ್ರಿಕ ಹಾಗೂ ಲಾಜಿಸ್ಟಿಕ್ ಸಮಸ್ಯೆಗಳ ಕಾರಣದಿಂದ ಕಾರ್ಯಾಚರಣೆಯು ವಿಳಂಬಗೊಂಡಿದ್ದು, ನಂತರ ಡಿಸೆಂಬರ್ 6 ಅನ್ನು ಹೊಸ ದಿನಾಂಕವಾಗಿ ಆಯ್ಕೆ ಮಾಡಲಾಯಿತು.
ಅಯೋಧ್ಯೆಯ 16ನೇ ಶತಮಾನದ ಬಾಬರಿ ಮಸೀದಿ ಭಗವಾನ್ ರಾಮನ ಜನ್ಮಸ್ಥಳದ ಮೇಲೆ ನಿರ್ಮಾಣವಾಗಿದೆ ಎಂಬ ನಂಬಿಕೆ ಇದ್ದು, ಅದನ್ನು ಡಿಸೆಂಬರ್ 6, 1992 ರಂದು ಕೆಡವಲಾಯಿತು. ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, ಅದೇ ಸ್ಥಳದಲ್ಲಿ ಹೊಸ ರಾಮಮಂದಿರದ ನಿರ್ಮಾಣ ಕಾರ್ಯ ನಡೆಯಿತು.

