ಲಕ್ನೋ: ವರದಕ್ಷಿಣೆ ಕಿರುಕುಳ ನೀಡಿ ನಿಕ್ಕಿ ಎಂಬ ಮಹಿಳೆಯನ್ನು ಆಕೆಯ ಪತಿ, ಅತ್ತೆ-ಮಾವ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿತ್ತು. ಇದೀಗ ಮಗಳನನ್ನು ಕೊಂದ ಪಾಪಿಯನ್ನು ಎನ್ಕೌಂಟರ್ ಮಾಡಿ ಕೊಲ್ಲಬೇಕೆಂದು ಮೃತ ನಿಕ್ಕಿ ತಂದೆ ಕಣ್ಣೀರು ಹಾಕಿದ್ದಾರೆ.

ಮಗಳ ಗಂಡ ವಿಪಿನ್ ಭಾಟಿ, ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದ. ಆದ್ದರಿಂದ ನಿಕ್ಕಿಯನ್ನು ದೂರವಿಡಲು ಬಯಸುತ್ತಿದ್ದ. ವಿಪಿನ್ ಭಾಟಿ ಹಾಗೂ ಆತನ ಕುಟುಂಬಸ್ಥರು ಕೊಲೆಗಾರರು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.
ನನ್ನ ಮಗಳು ಪಾರ್ಲರ್ ನಡೆಸುತ್ತಿದ್ದಳು. ಅದರಲ್ಲಿ ಬಂದ ಹಣದಿಂದ ತನ್ನ ಮಗನನ್ನು ಬೆಳೆಸುತ್ತಿದ್ದಳು. ಆದರೆ ಆಕೆಯ ಪತಿ ಹಾಗೂ ಅತ್ತೆ-ಮಾವ ಹಣಕ್ಕಾಗಿ ಅವಳನ್ನು ಹಿಂಸಿಸುತ್ತಿದ್ದರು. ಈಗ ಇಡೀ ಕುಟುಂಬವೇ ಪಿತೂರಿ ಮಾಡಿ ನನ್ನ ಮಗಳನ್ನು ಕೊಂದರು ಎಂದು ದುಃಖಿಸಿದ್ದಾರೆ.
ಮೊದಲು ಅವರು ವರದಕ್ಷಿಣೆಯಾಗಿ ಸ್ಕಾರ್ಪಿಯೋಗೆ ಬೇಡಿಕೆ ಇಟ್ಟರು. ಅದನ್ನು ನೀಡಲಾಯಿತು. ನಂತರ, ಅವರು ಬುಲೆಟ್ ಬೈಕ್ ಕೇಳಿದ್ದರು. ಅದನ್ನೂ ಸಹ ನೀಡಲಾಯಿತು. ಆದರೂ, ಅವರು ನನ್ನ ಮಗಳನ್ನು ಹಿಂಸಿಸುತ್ತಲೇ ಇದ್ದರು. ಇತ್ತೀಚೆಗೆ ನಾನು ಮರ್ಸಿಡಿಸ್ ಖರೀದಿಸಿದ್ದೆ. ಇದು ವಿಪಿನ್ ಕಣ್ಣಿಗೆ ಬಿದ್ದಿತ್ತು. ಅದನ್ನು ಸಹ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಆರೋಪಿ ಪತಿ ವಿಪಿನ್ನನ್ನು ಎನ್ಕೌಂಟರ್ ಮಾಡಿ ಕೊಲ್ಲಬೇಕು. ಯೋಗಿಯವರು ಪಿಕ್ಪಾಕೆಟ್ ಮಾಡಿದವರ ಕಾಲಿಗೆ ಗುಂಡು ಹಾರಿಸುತ್ತಾರೆ. ಆದರೆ ಇವರೆಲ್ಲ ಕೊಲೆಗಾರರು ಅವರನ್ನು ಕೊಲ್ಲುವುದಿಲ್ಲವೇ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ?
ಗ್ರೇಟರ್ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಎಂಬ ಮಹಿಳೆಯನ್ನು ಆಕೆಯ ಪತಿ, ಅತ್ತೆ ಮಾವ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಮಹಿಳೆಯ ಪತಿ ಮತ್ತು ಆಕೆಯ ಅತ್ತೆ, ಮಹಿಳೆಯ ಕೂದಲನ್ನು ಹಿಡಿದು ಥಳಿಸುತ್ತಿರುವ ವೀಡಿಯೊದಲ್ಲಿ ವೈರಲ್ ಆಗಿತ್ತು. ಅಲ್ಲದೇ ಬಳಿಕ ಬೆಂಕಿ ಹೊತ್ತಿ ಉರಿಯುವಾಗ ಆಕೆ ಮೆಟ್ಟಿಲಿನಿಂದ ಇಳಿದು, ನೆಲದ ಮೇಲೆ ಕುಳಿತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಆಕೆಯನ್ನು ನೆರೆಹೊರೆಯವರ ಸಹಾಯದಿಂದ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆಯೇ ನಿಕ್ಕಿ ಸಾವನ್ನಪ್ಪಿದ್ದಾಳೆ.

