ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಮಂದಿಗೆ ಗಾಯ

ಶ್ರೀನಗರ: ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ ಐದು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ, 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಶ್ಮೀರದ ರಾಂಬನ್‌ನ ಚಂದರ್‌ಕೋಟ್ ಲಂಗರ್ ಪಾಯಿಂಟ್‌ನಲ್ಲಿ ನಡೆದಿದೆ.

ಅಮರನಾಥ ಯಾತ್ರೆಗಾಗಿ ಭಕ್ತರು ಐದು ಬಸ್‌ಗಳ ಮೂಲಕ ಪಹಲ್ಗಾಮ್‌ಗೆ ತೆರಳುತ್ತಿದ್ದರು. ಈ ವೇಳೆ ಲಂಗರ್ ಪಾಯಿಂಟ್‌ನಲ್ಲಿ ನಾಲ್ಕು ಬಸ್‌ಗಳು ನಿಂತಿದ್ದವು. ಇದೇ ಸಂದರ್ಭದಲ್ಲಿ ಯಾತ್ರೆಯ ಬೆಂಗಾವಲು ಪಡೆಯ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ಕಳೆದುಕೊಂಡು ಇನ್ನುಳಿದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ

ಅಪಘಾತದಲ್ಲಿ ಗಾಯಗೊಂಡವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಡಿಎಚ್ ರಾಂಬನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಯಾರಿಗೂ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಂಬನ್ ಡಿಸಿ ಮೊಹಮ್ಮದ್ ಅಲಿಯಾಸ್ ಖಾನ್, ಡಿಐಜಿ ಡಿಕೆಆರ್ ಶ್ರೀಧರ್ ಪಾಟೀಲ್, ಎಸ್‌ಎಸ್‌ಪಿ ರಾಂಬನ್ ಕುಲ್ಬೀರ್ ಸಿಂಗ್ ಮತ್ತು ಎಡಿಸಿ ವರುಣ್‌ಜೀತ್ ಸಿಂಗ್ ಚರಕ್ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಚಿಕಿತ್ಸೆ ಬಳಿಕ ಅಮರನಾಥ ಯಾತ್ರೆಗೆ ತೆರಳಲು ಅನುಮತಿಸಲಾಯಿತು ಎಂದು ತಿಳಿದು ಬಂದಿದೆ.

ಶನಿವಾರ ಬೆಳಿಗ್ಗೆ 6,900ಕ್ಕೂ ಹೆಚ್ಚು ಯಾತ್ರಿಕರ ತಂಡವು ಭಗವತಿ ನಗರದ ಮೂಲಕ ಅಮರನಾಥ ದೇವಾಲಯ ಭೇಟಿಗೆ ತೆರಳಿದರು. ಬುಧವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಯಾತ್ರೆಗೆ ಚಾಲನೆ ನೀಡಿದ ನಂತರ ಈವರೆಗೂ ಒಟ್ಟು 24,528 ಯಾತ್ರಿಕರು ಜಮ್ಮುವಿನ ಮೂಲ ಶಿಬಿರದಿಂದ ಯಾತ್ರೆಗೆ ತೆರಳಿದ್ದಾರೆ.