
ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿರುವ ಸಿಗಂದೂರು ಬ್ರಿಡ್ಜ್ ಜುಲೈ 14ರಂದು ಲೋಕಾರ್ಪಣೆ ಆಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು. ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಥಳ ಇನ್ನಷ್ಟೆ ನಿಗದಿ ಆಗಬೇಕಿದೆ ಎಂದು ತಿಳಿಸಿದರು.

ಇಂದಿನಿಂದ ಎರಡನೇ ಹಂತದ ಲೋಡ್ ಟೆಸ್ಟ್ ನಡೆಯಲಿದೆ. ಅಲ್ಲದೆ ಕೊನೆಯ ಹಂತದ ಕೆಲಸ ಕಾರ್ಯ ಬಾಕಿ ಇದೆ. ಇನ್ನು, ಸರ್ಕಾರದ ಆದೇಶದಲ್ಲಿ ಈ ಸೇತುವೆಗೆ ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ರಾಘವೇಂದ್ರ ತಿಳಿಸಿದರು.
ಈ ಸಿಗಂದೂರು ಸೇತುವೆಯು ಉದ್ಘಾಟನೆಗೊಂಡ ಬಳಿಕ, ಭಾರತದ 2ನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹಿರಿಮೆಗೂ ಪಾತ್ರವಾಗಲಿದೆ. ಇದು 2.44 ಕಿ.ಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. 17 – ಪಿಲ್ಲರ್ಗಳನ್ನು ಒಳಗೊಂಡಿದೆ. 2018ರ ಫೆಬ್ರವರಿಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ರೂ.423 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ನೂತನ ಕೇಬಲ್ ಸೇತುವೆಯಿಂದ ಶಿವಮೊಗ್ಗ ಜಿಲ್ಲೆಯ ಜನರು ಮಾತ್ರ ಪ್ರಯೋಜನವನ್ನು ಪಡೆದುಕೊಳ್ಳುವುದಿಲ್ಲ. ಹೊರ ಜಿಲ್ಲೆ ಮತ್ತು ಬೇರೆ ರಾಜ್ಯಗಳ ಪ್ರವಾಸಿಗರಿಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಸಾಗರ ಪಟ್ಟಣದಿಂದ ಸಿಗಂದೂರು ಅಥವಾ ತುಮರಿಗೆ ಹೋಗಲು ರಸ್ತೆ ಮಾರ್ಗವಾಗಿ 80 ಕಿ.ಮೀ ಕ್ರಮಿಸಬೇಕು. ಆದರೆ, ಹೊಸ ಸೇತುವೆಯು ಆ ದೂರ ಅರ್ಧದಷ್ಟು ಕಡಿಮೆ ಮಾಡಲಿದೆ.
ಸಿಗಂದೂರು ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದ್ದು, ಚೌಡೇಶ್ವರಿ ಅಮ್ಮನ ದೇಗುಲವಿದೆ. ಸಾಗರದಿಂದ ಸಿಗಂದೂರು ಸುಮಾರು 40 ಕಿ.ಮೀ ದೂರದಲ್ಲಿದ್ದು, ಮಾರ್ಗ ಮಧ್ಯೆ ಶರಾವತಿಯ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಲಾಂಚ್ ಮೂಲಕ ಪ್ರಯಾಣಿಸಿ, ಸಿಗಂದೂರನ್ನು ತಲುಪಬೇಕು. ಬೆಳ್ಳಗೆ ಆರಂಭವಾಗುವ ಲಾಂಚ್ ಸೇವೆ ಸಂಜೆ 6:30ಕ್ಕೆ ಸ್ಥಗಿತಗೊಳ್ಳುತ್ತದೆ. ನೂತನ ಸೇತುವೆಯಿಂದ ಯಾತ್ರಿಕರೊಂದಿಗೆ ಇಲ್ಲಿನ 5,000ಕ್ಕೂ ಅಧಿಕ ಕುಟುಂಬಗಳಿಗೂ ಪ್ರಯೋಜನವಾಗಲಿದೆ.
