ಕರ್ನಾಟಕ ಮಾವು ಬೆಳಗಾರರ ನೆರವಿಗೆ ಮುಂದಾದ ಕೇಂದ್ರ: 2.5 ಲಕ್ಷ ಟನ್​​ ಮಾವು ಖರೀದಿಗೆ ಒಪ್ಪಿಗೆ

ಬೆಂಗಳೂರು, ಜೂನ್​ 22: ಹಣ್ಣುಗಳ ರಾಜ ಮಾವಿನ ಹಣ್ಣಿಗೆ   ಸಂಕಷ್ಟ ಎದುರಾಗಿದೆ. ಬಗೆ ಬಗೆ ಮಾವನ್ನ ಕೇಳೋರಿಲ್ಲ. ಬೆಳೆದ ರೈತರಿಗೆ ಬೆಲೆಯೂ ಸಿಗುತ್ತಿಲ್ಲ. ಮಾವು ಬೆಳೆದವರ ಗೋಳು ಹೇಳ ತೀರದಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಕರ್ನಾಟಕದ ಮಾವು ಬೆಳಗಾರರ ನೆರವಿಗೆ ಮುಂದಾಗಿದ್ದು, 2.5 ಲಕ್ಷ ಟನ್​​ ಮಾವು ಖರೀದಿಗೆ ಒಪ್ಪಿಗೆ ಸೂಚಿಸಿದೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್   ಮತ್ತು ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಅವರ  ವಿಡಿಯೋ ಸಂವಾದದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಲೆಗಳಲ್ಲಿನ ವ್ಯತ್ಯಾಸದ ವೆಚ್ಚವನ್ನು ಭರಿಸುತ್ತವೆ ಮತ್ತು ಅದನ್ನು ರೈತರಿಗೆ ಪಾವತಿಸುತ್ತದೆ. ಒಟ್ಟು 2.5 ಲಕ್ಷ ಟನ್​​ ಮಾವು ಖರೀದಿಗೆ ಕೇಂದ್ರ ಒಪ್ಪಿಗೆ ಸೂಚಿಸಿದ್ದು, ಅಧಿಕೃತ ಆದೇಶ ಬಾಕಿ ಇದೆ. ಈ ಮಹತ್ವ ನಿರ್ಧಾರಕ್ಕೆ ಸಚಿವ ಚಲುವರಾಯ ಸ್ವಾಮಿ ಅವರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ರಿಗೆ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಉತ್ಪಾದನೆಯಾದ ಅಂದಾಜು 10 ಲಕ್ಷ ಮೆಟ್ರಿಕ್ ಟನ್​​ಗಳಲ್ಲಿ 2.5 ಲಕ್ಷ ಮೆಟ್ರಿಕ್ ಟನ್‌ ಗಳವರೆಗೆ ಪರಿಹಾರ ನೀಡುವ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ತೋತಾಪುರಿ ಮಾವಿನಹಣ್ಣಿಗೆ ರೈತರು ಸಾಮಾನ್ಯಕ್ಕಿಂತ ಕಡಿಮೆ ಬೆಲೆಯನ್ನು ಪಡೆಯುತ್ತಿರುವುದರಿಂದ, ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಮಾರುಕಟ್ಟೆ ದರಕ್ಕಿಂತ ಕಡಿಮೆಯಾದ ವ್ಯತ್ಯಾಸದ ವೆಚ್ಚವನ್ನು ಸಮಾನವಾಗಿ ಭರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಮುಂಚೆ ಕರ್ನಾಟಕ ಸರ್ಕಾರವು ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು, ಅದರಲ್ಲಿ ಟೊಮೆಟೊ ಮತ್ತು ಮಾವಿನಹಣ್ಣುಗಳ ಬೆಲೆಗಳು, ವಿಶೇಷವಾಗಿ ತೋತಾಪುರಿ ಮಾವಿನ ಬೆಲೆಯಲ್ಲಿ ನಿರಂತರವಾಗಿ ಕುಸಿಯುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಟೊಮೆಟೊ ಬೆಲೆ ಕಡಿಮೆಯಾಗಿದ್ದರೂ, ಸ್ಥಿರವಾಗಿದೆ. ಆದ್ದರಿಂದ ಟೊಮೆಟೊಗೆ ಯಾವುದೇ ತಕ್ಷಣದ ಕ್ರಮ ಅಗತ್ಯವಿಲ್ಲ ಎಂದು ಕೃಷಿ ಸಚಿವರು ಹೇಳಿದ್ದಾರೆ.