ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಬೆಂಗಳೂರು – ಮೈಸೂರು ದಶಪಥ ರಸ್ತೆ ಅಪಘಾತ ವಿಚಾರ ಸದ್ದು ಮಾಡಿದೆ. ಹೆದ್ದಾರಿಯಲ್ಲಿ ಬೈಕ್ ಹಾಗೂ ತ್ರಿಚಕ್ರ ವಾಹನಗಳ ಓಡಾಟ ನಿಷೇಧ ಮಾಡುವಂತೆ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ನಾಯಕ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.

ದಶಪಥ ರಸ್ತೆ ಸಾವಿನ ಹೆದ್ದಾರಿಯಾಗಿದೆ. 6 ತಿಂಗಳಲ್ಲಿ 512 ಅಪಘಾತಗಳಾಗಿವೆ. ಅದರಲ್ಲಿ ಇಲ್ಲಿಯ ವರೆಗೂ 123 ಜನ ಮೃತಪಟ್ಟಿದ್ದಾರೆ. 575 ಜನರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಅನೇಕ ಪ್ರಾಣಿಗಳು ಸತ್ತಿವೆ. ಈ ಹೆದ್ದಾರಿಯಲ್ಲಿ ಫೆನ್ಸಿಂಗ್ ಸರಿಯಾಗಿ ಆಗಿಲ್ಲ. ಮೇಲ್ಸೇತುವೆ ಮಳೆ ಬಂದರೆ ಸೋರುತ್ತಿದೆ. ಹೆದ್ದಾರಿ ಕೆಲಸ ಇನ್ನು 30% ಬಾಕಿ ಇದೆ. ಮದ್ದೂರು ಬಳಿ ಈಗ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಆದರೆ ಸುರಕ್ಷಿತ ಕ್ರಮಗಳು ಸರಿಯಾಗಿ ಇಲ್ಲ ಎಂದಿದ್ದಾರೆ.

ಹೆದ್ದಾರಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲ. ಅಪಘಾತವಾದರೆ ಅಂಬುಲೆನ್ಸ್ ವ್ಯವಸ್ಥೆ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದಿದ್ದಾರೆ.

ಇದಕ್ಕೆ ಉತ್ತರ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಕೇಂದ್ರದ ಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಅಧಿಕಾರಿಗಳು ಸಭೆ ಮಾಡಿ ಕ್ರಮಗಳನ್ನು ಸೂಚಿಸಿದ್ದಾರೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಸರಿ ಮಾಡಿಸುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.