ಸೌದೆ ರೀತಿಯಲ್ಲಿ ಕೊಡಲಿಯಿಂದ ಹೆಂಡ್ತಿ ಕುತ್ತಿಗೆ ಸೀಳಿದ ಪಾಪಿ ಗಂಡ

ಬಾಗಲಕೋಟೆ (ಜು.05): ತಾಳಿ ಕಟ್ಟಿಸಿಕೊಂಡು ಜೊತೆಯಲ್ಲಿ ಜೀವನ ಮಾಡುತ್ತಿದ್ದ ಹೆಂಡತಿಯ ಶೀಲದ ಮೇಲೆಯೇ ಶಂಕೆ ವ್ಯಕ್ತಪಡಿಸಿದ ಗಂಡ, ಉರುವಲು ಕಟ್ಟಿಗೆಯನ್ನು ಸೀಳುವ ಕೊಡಲಿಯಿಂದಲೇ ಹೆಂಡತಿಯ ಕುತ್ತಿಗೆಯನ್ನು ಸೀಳಿ ಬರ್ಬರ ಕೊಲೆ ಮಾಡಿರುವ ಘಟನೆ ನಡೆದಿದೆ. 

ಹೌದು, ಗಂಡನಿಂದಲೇ ಹೆಂಡತಿಯ ಕೊಲೆಯಾಗಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ರೇಖಾ ಪರಸಪ್ಪ ಬೀಳಗಿ (24) ಕೊಲೆಯಾದ ಮಹಿಳೆ ಆಗಿದ್ದಾಳೆ. ಇವಳ ಪತಿ ಪರಸಪ್ಪ ಬೀಳಗಿ (28) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಮಂಗಳವಾರ ಸಂಜೆ ವೇಳೆ ಈ ಘಟನೆ ನಡೆದಿದೆ. ಗಂಡನ ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪದೆ ಪದೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಇಬ್ಬರ ನಡುವಿನ ಜಗಳ ಅತಿರೇಕಕ್ಕೆ ತಿರುಗಿ, ಗಂಡನೇ ಮನೆಯಲ್ಲಿದ್ದ ಕೊಡಲಿಯಿಂದ ತನ್ನ ಹೆಂಡತಿಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದಾನೆ. 

ಕೋಪ ಅತಿರೇಕಕ್ಕೆ ಏರಿ ಹೆಂಡತಿಯನ್ನು ಕೊಲೆ: ಗ್ರಾಮೀಣ ಭಾಗದಲ್ಲಿ ಯಾರದೇ ಮನೆಯಲ್ಲಿ ಜಗಳ ನಡೆದರೂ ನೆರೆ-ಹೊರೆಯವರು ಜಗಳ ಬಿಡಿಸಿ ಅತಿರೇಕಕ್ಕೆ ಹೋಗದಂತೆ ತಡೆಯುತ್ತಾರೆ. ಆದರೆ, ಇವರ ಮನೆಯಲ್ಲಿ ಜಗಳ ಮಾಡುತ್ತಿದ್ದಾಗ ಯಾರೇ ಅದನ್ನು ತಡೆಯಲು ಹೋದರೆ, ಅವರಿಗೂ ಪರಸಪ್ಪ ಬಾಯಿಗೆ ಬಂದಂತೆ ಬೈಯುತ್ತಿದ್ದನು. ಇದರಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿದ್ದರೂ ಅದನ್ನು ಯಾರೊಬ್ಬರೂ ಬಿಡಿಸಲು ಮುಂದಾಗಿಲ್ಲ. ಇವರಿಬ್ಬರೇ ಸಂಜೆ ವೇಳೆ ಮನೆಯಲ್ಲಿ ಏರು ಧ್ವನಿಯಲ್ಲಿ ಜಗಳ ಮಾಡುತ್ತಲೇ ಕೋಪ ಅತಿರೇಕಕ್ಕೆ ಏರಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.

ಆಸ್ಪತ್ರೆಗೆ ದಾಖಲಿಸದ ಗಂಡ: ಇನ್ನು ಜಗಳದ ನಡುವೆ ಕೋಪದಲ್ಲಿ ಹೆಂಡತಿಯ ಮೇಲೆ ಹೊಡಲಿಯಿಂದ ಕುತ್ತಿಗೆಯನ್ನು ಸೀಳಿದಾಗ ಹೆಂಡತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಳೆ. ಆಗಲೂ ಪರಸಪ್ಪ ತನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುತ್ತಿದ್ದಳೇನೋ? ಆದರೆ, ರಕ್ತ ಹರಿಯುತ್ತಾ ಒದ್ದಾಡುತ್ತಿದ್ದರೂ ಹೆಂಡತಿಯನ್ನು ರಕ್ಷಣೆ ಮಾಡಲು ಮುಂದಾಗದೇ ಸುಮ್ಮನೇ ಕೈಬಿಟ್ಟಿದ್ದಾನೆ. ಮತ್ತೊಂದೆಡೆ ಜೋರಾಗಿ ಕಿರುಚಲೂ ಆಗದಂತೆ ಗಂಟಲನ್ನೇ ಸೀಳಿದ್ದರಿಂದ ಪರಸಪ್ಪನ ಪತ್ನಿ ರೇಖಾ ಸ್ಥಳದಲ್ಲಿಯೇ ಒದ್ದಾಡಿ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾಳೆ. 

ಪತಿಯ ಮೇಲೆ ಆರೋಪ: ಬಡತನವಾದರೂ ಪರವಾಗಿಲ್ಲ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಪರಸಪ್ಪನಿಗೆ ಮದುವೆ ಮಾಡಿಕೊಟ್ಟ ರೇಖಾಳ ತಂದೆ- ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರೂ ಜಗಳ ಮಾಡಿಕೊಂಡು ಸುಮ್ಮನಾಗುತ್ತಾರೆ ಎಂದು ತಿಳಿದುಕೊಂಡಿದ್ದೆವು. ಆದರೆ, ಈಗ ತಮ್ಮ ಮಗಳನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ಇನ್ನು ಮೃತ ರೇಖಾಳ ಪೋಷಕರು ವರದಕ್ಷಿಣೆ ಕಿರುಕುಳಕ್ಕಾಗಿ ಪರಸಪ್ಪ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.