ಅಕ್ಕಿ ಬದಲು ಹಣ ಕೊಟ್ಟರೆ ಹೋರಾಟ ಮಾಡ್ತೀವಿ – ಸರ್ಕಾರಕ್ಕೆ ಪಡಿತರ ವಿತರಕರ ಸಂಘ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನ ಇಂದಿನಿಂದ ಜಾರಿಗೆ ತಂದಿದೆ. ‘ಕೈ’ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಗ್ಯಾರಂಟಿಯಲ್ಲಿ ಪ್ರಮುಖವಾಗಿದ್ದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿಕೊಂಡಿತ್ತು.

ಕೇಂದ್ರ ಸರ್ಕಾರದಿಂದ ಬರುವ 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರ ಇನ್ನೂ 5 ಕೆಜಿ‌ ಅಕ್ಕಿ ನೀಡುತ್ತೇವೆ ಅಂತ ಹೇಳಿತ್ತು. ‌ಅನೇಕ ಕಾರಣಗಳಿಂದ‌ ಕೇಂದ್ರ ಸರ್ಕಾರಕ್ಕೆ‌ ರಾಜ್ಯ ಸರ್ಕಾರ ಅಕ್ಕಿಗೆ ಹಣ ನೀಡುತ್ತೇವೆ. ಅಕ್ಕಿ ನೀಡಿ ಅಂದ್ರೂ ಅಕ್ಕಿಯನ್ನ ನೀಡಲು ಮುಂದಾಗಿಲ್ಲ.

ಬೇರೆ ರಾಜ್ಯಗಳಿಂದಲೂ ಅಕ್ಕಿ ಖರೀದಿಸಲು ಸರ್ಕಾರ ಕಸರತ್ತು ಮಾಡಿತ್ತು. ‌ಅಲ್ಲೂ ಅಕ್ಕಿ ಸಿಗದ ಕಾರಣರಿಂದ‌ ಪಡಿತರ ಚೀಟಿ ಹೊಂದಿದರವರಿಗೆ 5 ಕೆಜಿ ಅಕ್ಕಿಯ ಹಣ ನೀಡಲು ಮುಂದಾಗಿದೆ.

ಆದರೇ ಪಡಿತರ ವಿತರಕರು ಇದನ್ನ ವಿರೋಧಿಸಿದ್ದಾರೆ. ಇದರಿಂದ ನಮ್ಮ ಕಮಿಷನ್‌ಗೆ ಬ್ರೇಕ್ ಬೀಳಲಿದೆ. ಸರ್ಕಾರ ಹಣವನ್ನ ನೀಡದೇ ಅದರ ಬದಲು ಇತರೆ ದಿನಸಿ ಪದಾರ್ಥಗಳನ್ನ ನೀಡಬೇಕು. ರಾಜ್ಯದಲ್ಲೇ ಬೆಳೆಯುವ ಬೆಳೆಕಾಳು, ಸಕ್ಕರೆ, ಉಪ್ಪು, ಬೆಲ್ಲ, ಹೀಗೆ ಬೇರೆ ಪದಾರ್ಥಗಳನ್ನ ಕೊಡಿ. ಹಣ ನೀಡುವುದರಿಂದ ಸರ್ಕಾರಕ್ಕೂ ಹೊರೆ ಆಗಲಿದೆ ಎಂಬ ವಿಚಾರವನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಪಡಿತರ ವಿತರಕರ ಸಂಘ ನಿರ್ಧರಿಸಿದೆ. 

ಈ ಸಂಬಂಧ ಇದೇ ಜುಲೈ 4 ಸಭೆ ಮಾಡಲು ಪಡಿತರ ವಿತರಕರ ಸಂಘ ನಿರ್ಧಾರ ಮಾಡಿದೆ. ಸರ್ಕಾರ‌ ಹಣ ನೀಡಲು ಮುಂದಾದರೆ ನಾವೂ ಹೋರಾಟ ಮಾಡಬೇಕಾಗುತ್ತದೆ ಅಂತ ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿದೆ.