‘ನಿಮ್ಮಪ್ಪನಿಗೆ ಸಿಎಂ ಕುರ್ಚಿ ಬಿಟ್ಟುಕೊಡಲು ಹೇಳಿ’: ಯತೀಂದ್ರ ವಿರುದ್ಧ, -ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಜಾತಿಗಣತಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯಗೆ ಏನು ಗೊತ್ತು. ಅವರು ಇನ್ನೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಸೋಷಿಯೋ ಎಕನಾಮಿಕ್ ಬಗ್ಗೆ ಅವರಿಗೆ ಏನು ಗೊತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ವಿರೋಧ ಮಾಡಿದರು. ಹಾಗಾಗಿ ಮತ್ತೊಮ್ಮೆ ಜಾತಿಗಣತಿ ಮಾಡುತ್ತೇವೆ ಎನ್ನುತ್ತಾರೆ. 39 ಜನ ಶಾಸಕರು ಲಿಂಗಾಯತರು ಇದ್ದಾರೆ. ಸಿದ್ದರಾಮಯ್ಯ ತಮ್ಮ ಸಿಎಂ ಕುರ್ಚಿ ಬಿಟ್ಟು ಕೊಡುತ್ತಾರಾ? ವಿರೋಧ ಇದ್ದರೆ ಕುರ್ಚಿ ಬಿಟ್ಟು ಕೊಡಲಿ ಎಂದರು.

ಯತೀಂದ್ರ ಸಿದ್ದರಾಮಯ್ಯ ತಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನೋ ಹೇಳುತ್ತಿದ್ದಾರೆ. ನಿಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನೋ ಹೇಳಬೇಡಿ. ಸಿಎಂ ಸಿದ್ದರಾಮಯ್ಯ 150 ಕೋಟಿ ವ್ಯಯ ಮಾಡಿ ಕಾಟಾಚಾರಕ್ಕೆ ಈ ಗಣತಿ ಮಾಡಿದ್ದರು. ಇದನ್ನು ಬಿಜೆಪಿ, ಜೆಡಿಎಸ್ ವಿರೋಧ ಮಾಡಿತು. ಇದು ಅವೈಜ್ಞಾನಿಕ ಅಂತ ಎಲ್ಲರಿಗೂ ಗೊತ್ತಿತ್ತು. ಈಗ ರಾಹುಲ್ ಗಾಂಧಿ ಭೇಟಿ ಮಾಡಿದ ಬಳಿಕ ಮತ್ತೊಂದು ಬಾರಿ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ 150 ಕೋಟಿ ಹಣ ವ್ಯರ್ಥವಾಗಿದೆ ಎಂದು ಹರಿಹಾಯ್ದರು.

ಈಗಾಗಲೇ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೇವೆ ಅಂತ ಹೇಳಿದೆ. ಹೀಗಿದ್ದಾಗ ಮತ್ತೊಂದು ಬಾರಿ ನಿಮ್ಮ ಗಣತಿ ಮಾಡುವುದು ಬೇಡ. ಇದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಮಾಡುತ್ತಿರುವ ತಂತ್ರ ಅಷ್ಟೇ ಎಂದು ಕಿಡಿಕಾರಿದರು.