ಆರ್​ಸಿಬಿ ಗೆಲುವಿನ ಸೆಲೆಬ್ರೇಷನ್ ವೇಳೆ ಕಾಲ್ತುಳಿತ; ಕೊನೆಗೂ ಮೌನ ಮುರಿದ -ದ್ರಾವಿಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿಗೆ ಐಪಿಎಲ್ ಕಪ್ ಎತ್ತಿದೆ. ಈ ಮೂಲಕ 18 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಇದರ ಸೆಲಬ್ರೇಷನ್​ಗಾಗಿ ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಹೊರ ಭಾಗದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟರೆ, 50 ಜನರು ಗಾಯಗೊಂಡಿದ್ದರು. ಈ ಘಟನೆ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಕೋಚ್  ರಾಹುಲ್ ದ್ರಾವಿಡ್  ಅವರು ಕೊನೆಗೂ ಮೌನ ಮುರಿದಿದ್ದಾರೆ.  ಅವರು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ.

‘ಬೆಂಗಳೂರಿನಲ್ಲಿರುವ ಜನರಿಗೆ ಕ್ರೀಡೆಯ ಬಗ್ಗೆ ಪ್ರೀತಿ ಇದೆ. ನಾನು ಕೂಡ ಬೆಂಗಳೂರಿನವನು. ಜನರು ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ಕ್ರೀಡೆಯನ್ನೂ ಪ್ರೀತಿಸುತ್ತಾರೆ. ಫುಟ್​ಬಾಲ್ ಇರಲಿ, ಕಬಡ್ಡಿ ಇರಲಿ, ಎಲ್ಲಾ ತಂಡವನ್ನು ಜನರು ಅನುಸರಿಸುತ್ತಾರೆ. ಆರ್​ಸಿಬಿ ನಿಜಕ್ಕೂ ದೊಡ್ಡ ಹಿಂಬಾಲಕರನ್ನು ಹಿಂದಿರೋ ತಂಡ. ನಡೆದಿರುವ ಘಟನೆ ನಿಜಕ್ಕೂ ದುರದೃಷ್ಟಕರ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನನ್ನ ಸಂತಾಪ’ ಎಂದು ದ್ರಾವಿಡ್ ಹೇಳಿದ್ದಾರೆ.

ಆರ್​ಸಿಬಿ ತಂಡ ಕಪ್ ಗೆದ್ದ ಖುಷಿಯಲ್ಲಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಎರಡು ಲಕ್ಷ ಜನರು ಸೇರಿದ್ದರು.  ವಿಧಾನಸೌಧದಲ್ಲಿ ಕ್ರೀಡಾಪಟುಗಳನ್ನು ಸನ್ಮಾನ ಮಾಡಲಾಯಿತು. ಅಲ್ಲಿಯೂ ಸಾಕಷ್ಟು ಜನರು ಸೇರಿದ್ದರು. ಆದರೆ, ಯಾವುದೇ ತೊಂದರೆ ಉಂಟಾಗಿರಲಿಲ್ಲ. ಆದರೆ, ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರ ಭಾಗದಲ್ಲಿ ಸಾಕಷ್ಟು ಅಚಾತುರ್ಯಗಳು ನಡೆದವು.

ಸ್ಟೇಡಿಯಂ ಹೊರ ಭಾಗದಲ್ಲಿ ಸ್ಲ್ಯಾಬ್ ಒಂದನ್ನು ತಾತ್ಕಾಲಿಕವಾಗಿ ಹಾಕಲಾಗಿತ್ತು. ಇದು ಕುಸಿದಿದ್ದರಿಂದ ಜನರು ಆತಂಕಗೊಂಡು ಚೆಲ್ಲಾಪಿಲ್ಲಿ ಆಗಿ ಓಡಿದರು. ಈ ವೇಳೆ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತಪಟ್ಟವರಲ್ಲಿ ಮಕ್ಕಳು, ಯುವಕರು ಹಾಗೂ ಯುವತಿಯರು ಸೇರಿದ್ದಾರೆ. ಮೃತರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಸದ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಡೋದಾಗಿ ಸರ್ಕಾರ ಘೋಷಿಸಿದೆ. ಆರ್​​ಸಿಬಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುತ್ತಿದೆ. ಸದ್ಯ ಆರ್​ಸಿಬಿ ಫ್ರಾಂಚೈಸಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಾಲೆಯನ್ನು ಬಂಧಿಸಲಾಗಿದೆ.  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಕಾರ್ಯದರ್ಶಿ ಎ. ಶಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.