ದರ್ಶನ್​ ಅರೆಸ್ಟ್​​ ಆಗಿ 1 ವರ್ಷ:’ ಇಲ್ಲಿದೆ ಪ್ರಕರಣದ ಇಂಚಿಂಚು ಮಾಹಿತಿ; ಮುಂದಿನ ಸಿನಿಮಾ ನೋಡಲು ಫ್ಯಾನ್ಸ್​ ಕಾತರ

2024 ಜೂನ್​ 11. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕನ್ನಡದ ಖ್ಯಾತ ನಡ ಅರೆಸ್ಟ್ ಆದ ದಿನ. ಕೊಲೆ ಪ್ರಕರಣವೊಂದರ ಆರೋಪ ಹೊತ್ತು ನಟ ಬಂಧನಕ್ಕೊಳಗಾಗಿದ್ದಾರೆಂಬ ಸುದ್ದಿ ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದು ಅಭಿಮಾನಿಗಳಿಗೆ ಆಘಾತ ತಂದಿತ್ತು. ಚಿತ್ರರಂಗದವರಿಗೂ ನುಂಗಲಾರದ ತುತ್ತಾಗಿತ್ತು. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಅಂತಿಮವಾಗಿ 2024ರ ಡಿಸೆಂಬರ್​ಗೆ ನಟ ಜಾಮೀನು ಪಡೆದರು. ಇದೀಗ ಅಭಿಮಾನಿಗಳು ಅವರ ಮುಂದಿನ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ.

ದರ್ಶನ್​​​ ಪ್ರಕರಣದ ಮಾಹಿತಿ:

  • 2024ರ ಜೂನ್​ 11ರಂದು ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ಖ್ಯಾತಿಯ ನಟ ದರ್ಶನ್ ಅರೆಸ್ಟ್​.
  • ದರ್ಶನ್​​ ಗೆಳತಿ ಪವಿತ್ರಾ ಗೌಡ ಸೇರಿ 17 ಆರೋಪಿಗಳು ಅರೆಸ್ಟ್​.
  • ಕೊಲೆ ಪ್ರಕರಣದ ಆರೋಪ ಹೊತ್ತ ದರ್ಶನ್​ ತಂಡ.
  • 2024ರ ಜೂನ್ 8ರಂದು ನಡೆದಿತ್ತು ರೇಣುಕಾಸ್ವಾಮಿ ಕೊಲೆ.
  • ದರ್ಶನ್​ ಗೆಳತಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿರುವ ಆರೋಪವಿದ್ದು, ಈ ಹಿನ್ನೆಲೆ ಕೊಲೆ.
  • ಜೂನ್​ 11ರಂದು ದರ್ಶನ್ ತಂಡ ಅರೆಸ್ಟ್​​.
  • ಮೊದಲು ದರ್ಶನ್ ಸೇರಿದಂತೆ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.
  • ನಂತರ, ಜೈಲಿನಿಂದ ದರ್ಶನ್​ ಫೋಟೋಗಳು ವೈರಲ್​ ಆದವು.
  • ದರ್ಶನ್​ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂತು.
  • ರಾಜಾತಿಥ್ಯ ಆರೋಪದ ಹಿನ್ನೆಲೆ, ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​​ ಮಾಡಲಾಯಿತು.
  • ನಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಯಿತು.
  • ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಕೆಲವು ಬಾರಿ ವಿಚಾರಣೆ ನಡೆದಿದೆ.
  • ದರ್ಶನ್​ ಪತ್ನಿ ಮತ್ತು ಸಹೋದರನ ಜೊತೆಗೆ ಖ್ಯಾತ ನಟ ಧನ್ವೀರ್​​ ಅವರು ಕೋರ್ಟ್​​ ಮತ್ತು ಜೈಲಿನ ಬಳಿ ಹಲವು ಬಾರಿ ಕಾಣಿಸಿಕೊಂಡು ಸುದ್ದಿಯಾದರು.
  • 2024ರ ಅಕ್ಟೋಬರ್ 30ರಂದು ದರ್ಶನ್​ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಯಿತು.
  • ವೈದ್ಯಕೀಯ ಕಾಣಗಳ ಆಧಾರದ ಮೇಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಯಿತು.
  • ಡಿಸೆಂಬರ್‌ ಕೊನೆಗೆ ಹೈಕೋರ್ಟ್ ದರ್ಶನ್​ ಮತ್ತು ಇತರೆ ಆರೋಪಿಗಳಿಗೆ ಪೂರ್ಣಾವಧಿ ಜಾಮೀನು ಮಂಜೂರು ಮಾಡಿತು.
  • ಈ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.
  • ವಿಚಾರಣೆ ಮುಂದುವರಿದಿದೆ.
  • ದರ್ಶನ್, ಪವಿತ್ರಾ ಗೌಡ ಈಗಾಗಲೇ ಹಲವು ಬಾರಿ ಕೋರ್ಟ್​​ಗೆ ಹಾಜರಾಗಿದ್ದಾರೆ.

ಮಾರ್ಚ್​​ 12ಕ್ಕೆ ಡೆವಿಲ್​ ಚಿತ್ರೀಕರಣ ಪುನರಾರಂಭ: ಚಾಲೆಂಜಿಂಗ್ ಸ್ಟಾರ್​ನ ಮುಂಬರುವ ಚಿತ್ರ “ದಿ ಡೆವಿಲ್”. 2024ರ ಕ್ರಿಸ್ಮಸ್​​ಗೆ ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತ ಹಿನ್ನೆಲೆ, ನಾಯಕ ನಟ ಬಹುದಿನಗಳವರೆಗೆ ಸೆರೆವಾಸ ಅನುಭವಿಸಬೇಕಾಯಿತು. ಡಿಸೆಂಬರ್​​​ನಲ್ಲಿ ಜಾಮೀನು ಪಡೆದ ನಟ, ಮಾರ್ಚ್​ನಲ್ಲಿ ತಮ್ಮ ಚಿತ್ರವನ್ನು ಪುನರಾರಂಭಿಸಿದರು. ಹೌದು, ಮಾರ್ಚ್​​ 12ರಂದು ದರ್ಶನ್​ ಮತ್ತು ಚಿತ್ರತಂಡ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಚಿತ್ರೀಕರಣದಲ್ಲಿ ಮತ್ತೆ ಪಾಲ್ಗೊಂಡರು. ಚಿತ್ರೀಕರಣವೀಗ ಭರದಿಂದ ಸಾಗಿದೆ.