IPL 2025 SRH vs MI: ಹೈದರಾಬಾದ್ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಸಿಡಿಮದ್ದು ಪ್ರದರ್ಶನ ಹಾಗೂ ಚಿಯರ್ಲೀಡರ್ಸ್ ಕಾಣಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 41ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಈ ಪಂದ್ಯದ ವೇಳೆ ಚಿಯರ್ ಲೀಡರ್ಸ್ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಸಿಡಿಮದ್ದು ಪ್ರದರ್ಶನವನ್ನು ಸಹ ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಮಂಗಳವಾರ (ಏಪ್ರಿಲ್ 22) ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಸಾವನ್ನಪ್ಪಿದ್ದು, ಇಡೀ ದೇಶವೇ ಶೋಕಾಚರಣೆಯಲ್ಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೂ ಮುನ್ನ ಒಂದು ನಿಮಿಷ ಮೌನ ಆಚರಿಸಲು ಬಿಸಿಸಿಐ ನಿರ್ಧರಿಸಿದೆ .

ಇದಲ್ಲದೆ, ಪಹಲ್ಗಾಮ್ನಲ್ಲಿ ನಡೆದ ಘೋರ ಭಯೋತ್ಪಾದಕ ಕೃತ್ಯದ ಬಲಿಪಶುಗಳ ಸ್ಮರಣಾರ್ಥ ಎರಡೂ ತಂಡಗಳ ಆಟಗಾರರು ಕಪ್ಪು ತೋಳುಪಟ್ಟಿಗಳನ್ನು ಧರಿಸಲಿದ್ದಾರೆ. MI ಮತ್ತು SRH ನಡುವಿನ ಪಂದ್ಯದಲ್ಲಿ ಪಟಾಕಿ ಸಿಡಿಸುವುದಿಲ್ಲ ಎಂದು ತಿಳಿಸಲಾಗಿದೆ. ಹಾಗೆಯೇ ಈ ಪಂದ್ಯದಿಂದ ನರ್ತಿಸುವ ಚಿಯರ್ಲೀಡರ್ಸ್ ಗಳನ್ನು ಸಹ ಕೈ ಬಿಡಲಾಗಿದೆ.
ಹೀಗಾಗಿ ಇಂದಿನ ಪಂದ್ಯದ ವೇಳೆ ಸನ್ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಇನ್ನು ಪಹಲ್ಗಾಮ್ನಲ್ಲಿ ನಡೆದ ಈ ಭೀಕರ ದಾಳಿಯನ್ನು ಹಲವಾರು ಹಾಲಿ ಮತ್ತು ಮಾಜಿ ಭಾರತೀಯ ಕ್ರಿಕೆಟಿಗರು ಖಂಡಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ತೀವ್ರ ದುಃಖವಾಗಿದೆ. ಈ ಅರ್ಥಹೀನ ಹಿಂಸಾಚಾರವನ್ನು ಖಂಡಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಾವು ಒಗ್ಗಟ್ಟು ಮತ್ತು ಬೆಂಬಲದಲ್ಲಿ ಶಕ್ತಿಯನ್ನು ಕಂಡುಕೊಳ್ಳೋಣ” ಎಂದು ಭಾರತದ ಮಾಜಿ ಕ್ರಿಕೆಟಿಗ ಆರ್ಪಿ ಸಿಂಗ್ ಎಕ್ಸ್ನಲ್ಲಿ ಬರೆದಿದ್ದಾರೆ.
ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಈ ಕಠಿಣ ಸಮಯದಲ್ಲಿ ರಾಷ್ಟ್ರವು ಒಂದಾಗಬೇಕೆಂದು ಕರೆ ನೀಡಿದ್ದಾರೆ. ಅಲ್ಲದೆ ಈ ಇದೊಂದು ಭಯಾನಕ, ಹೇಡಿತನದ ಕೃತ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೊಂದು ಹೃದಯ ವಿದ್ರಾವಕ ಘಟನೆ. ನಿಧನರಾದವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದ್ವೇಷ ಯಾವಾಗ ನಿಲ್ಲುತ್ತದೆ?” ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ X ನಲ್ಲಿ ಬರೆದಿದ್ದಾರೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಕೃನಾಲ್ ಪಾಂಡ್ಯ ಕೂಡ ಈ ಘಟನೆಗೆ ಮರುಗಿದ್ದು, ನಿಜಕ್ಕೂ ಇದು ಹೃದಯ ವಿದ್ರಾವಕ. ಕ್ರೂರ ದಾಳಿಗೆ ಬಲಿಪಶುಗಳಾದವರಿಗೆ ನ್ಯಾಯ ಸಿಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.
