
ಶ್ರೀಹರಿಕೋಟಾ, ಮೇ 18: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 101 ನೇ ಮಿಷನ್ ವಿಫಲವಾಗಿದೆ. ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ 101 ನೇ ಬಾಹ್ಯಾಕಾಶ ಯಾನವು ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಫಲವಾಗಿದೆ. ಪಿಎಸ್ಎಲ್ವಿ-ಸಿ61 ಉಡಾವಣೆ ವಿಫಲವಾದ ಬಗ್ಗೆ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರೇ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ವಿಶ್ಲೇಷಣೆಯ ನಂತರ ನಾವು ಮತ್ತೆ ಮಾಹಿತಿಯನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಭಾನುವಾರ ಬೆಳಗ್ಗೆ 5.59 ಕ್ಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ರಾಕೆಟ್ ಮೂಲಕ ಇಸ್ರೋ ಭೂ ವೀಕ್ಷಣಾ ಉಪಗ್ರಹ EOS-09 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು. ಇದಾದ ನಂತರ, ಇಸ್ರೋ ಈ ಕಾರ್ಯಾಚರಣೆ ಪೂರ್ಣಗೊಂಡಿಲ್ಲ ಎಂದು ಘೋಷಿಸಿತು.
ಇಸ್ರೋ ಸಂಸ್ಥೆ ಉಡಾವಣೆಗೆ ಪ್ರಯತ್ನಿಸಿದ್ದ ಇಒಎಸ್-09 ಉಪಗ್ರಹವು ಯಶಸ್ವಿ ಆಗಿದ್ದರೇ ಇದು ನಮಗೆ ಗಡಿ ಕಾಯುವಿಕೆ, ಬೇಹುಗಾರಿಕೆ, ರಾಷ್ಟ್ರೀಯ ಭದ್ರತೆಗೆ ಸಾಥ್ ನೀಡುತ್ತಿತ್ತು. ವಿಪತ್ತು ನಿರ್ವಹಣೆ ಸಮಯದಲ್ಲೂ ಸಹ ನೆರವಾಗುತ್ತಿತ್ತು. ಆದರೆ ಈಗ ತಾಂತ್ರಿಕ ಕಾರಣದಿಂದ ಉಡಾವಣೆ ಯಶಸ್ವಿ ಆಗಲಿಲ್ಲ ಎನ್ನಲಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಪೋಸ್ಟ್ ಮಾಡಿರುವ ಇಸ್ರೋ, ಇಂದು 101 ನೇ ಉಡಾವಣೆಯನ್ನು ಪ್ರಯತ್ನಿಸಲಾಯಿತು, ಪಿಎಸ್ಎಲ್ವಿ-ಸಿ 61 ಕಾರ್ಯಕ್ಷಮತೆ 2 ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗದ್ದು, ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.
PSLV-C-61 ರ ಹಾರಾಟದ ಅನುಕ್ರಮವು ವಿವಿಧ ಹಂತಗಳನ್ನು ಒಳಗೊಂಡಿದೆ, PS1 ಮತ್ತು PSOM ಅನ್ನು ನೆಲದಲ್ಲಿ ಉಡಾಯಿಸುವುದರಿಂದ ಹಿಡಿದು, ವಿವಿಧ ವಿಭಾಗಗಳನ್ನು ಬೇರ್ಪಡಿಸುವ ಹಂತವನ್ನು ಹೊಂದಿಗೆ. ಅಂತಿಮವಾಗಿ ಉಪಗ್ರಹವನ್ನು ರಾಕೆಟ್ನಿಂದ ಬೇರ್ಪಡಿಸುತ್ತದೆ. ಇದರಂತೆ ಮೂರನೇ ಹಂತದಲ್ಲಿ ಸಮಸ್ಯೆ ಎದುರಾಗಿದೆ.
ಇದು ಘನ ರಾಕೆಟ್ ಮೋಟಾರ್ ಆಗಿದ್ದು, ಇದು ಉಡಾವಣೆಯ ಹಂತದ ನಂತರ ಮೇಲಿನ ಹಂತಕ್ಕೆ ಒತ್ತಡ ಹೆಚ್ಚಾಗುತ್ತದೆ. ಈ ಹಂತವು 240 ಕಿಲೋನ್ಯೂಟನ್ಗಳ ಗರಿಷ್ಠ ಒತ್ತಡವನ್ನು ಹೊಂದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇಒಎಸ್-09ಉಪಗ್ರಹವು ಬಹುಮುಖಿ ಅನ್ವಯತೆಗಳನ್ನು ಹೊಂದಿದೆ. ಗಡಿಗಳ ಕಾವಲು ನಡೆಸಿ ಹಾಗೂ ಒಳನುಸುಳುವಿಕೆಯನ್ನು ಪತ್ತೆ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಗೆ ನೆರವಾಗುತ್ತದೆ. ಕೃಷಿ ಕ್ಷೇತ್ರಕ್ಕೂ ಇದರ ಉಪಯೋಗವಿದೆ. ಬೆಳೆ ನಿಗಾ ಮತ್ತು ಅರಣ್ಯ ಸಮೀಕ್ಷೆಗಳಿಗೆ ಅದು ಸಹಾಯ ಮಾಡುತ್ತದೆ.



