ಹೈದರಾಬಾದ್: ಚಾರ್​ಮಿನಾರ್​ ಬಳಿ ಅಗ್ನಿ ಅವಘಡ, 17 ಮಂದಿ ಸಾವು

ಹೈದರಾಬಾದ್, ಮೇ 18: ಹೈದರಾಬಾದ್​ನ ಚಾರ್​ಮಿನಾರ್ ಬಳಿಯ ಗುಲ್ಜಾರ್​ ಹೌಸ್​ನಲ್ಲಿರುವ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿವೆ ಎಂದು ಅಧಿಕಾರಿ ತಿಳಿಸಿದ್ದಾರೆ . ವರದಿಯ ಪ್ರಕಾರ, ಭಾನುವಾರ ಮುಂಜಾನೆ ಸಂಭವಿಸಿದ ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ಮೇ 14 ರಂದು ನಡೆದ ಮತ್ತೊಂದು ಘಟನೆಯಲ್ಲಿ, ಹೈದರಾಬಾದ್‌ನ ಬೇಗಂ ಬಜಾರ್‌ನಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಬ್ಬ ಮಹಿಳೆಯನ್ನು ರಕ್ಷಿಸಿದ್ದರು.

ಬೇಸಿಗೆ ‌ರಜೆಗೆ ಬಂದಿದ್ದ ಮಕ್ಕಳು ಕೂಡ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ.  ಮೂವರು ಮಹಿಳೆಯರು, ನಾಲ್ವರು ಮಕ್ಕಳು ಸೇರಿ 17 ಜನ ಸಾವನ್ನಪ್ಪಿದ್ದಾರೆ. ಇರಾಜ್(2), ರಾಜೇಂದ್ರಕುಮಾರ್​(67), ಹರ್ಷಾಲಿ(7), ಪ್ರಿಯಾನ್ಶಿ(6) ಪ್ರಥಮ್​(13), ಅರುಷಿ ಜೈನ್​(17), ಶೀತಲ್ ಜೈನ್​(37), ಸುಮಿತ್ರಾ(65),
ಅಭಿಷೇಕ್​(30), ಮುನ್ಶಿಬಾಯಿ(72) ಸೇರಿ 17 ಜನರು ಸಜೀವದಹನವಾಗಿದ್ದಾರೆ.  16 ಜನರಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.