ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?

ನವದೆಹಲಿ, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)​ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಬುಧವಾರ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ((Indus Waters Treaty)ವನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ತೆಗೆದುಕೊಂಡ ಐದು ಪ್ರಮುಖ ನಿರ್ಧಾರಗಳಲ್ಲಿ ಇದು ಕೂಡ ಒಂದು. ಅಂತಹ ಪರಿಸ್ಥಿತಿಯಲ್ಲಿ, ಸಿಂಧೂ ಜಲ ಒಪ್ಪಂದದ ಬಗ್ಗೆ ನೀವು ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

ಸಿಂಧೂ ನದಿ ನೀರು ಒಪ್ಪಂದ ಎಂದರೇನು?

ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 19, 1960 ರಂದು ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ), ಗಡಿಯಾಚೆಗಿನ ನೀರು ಹಂಚಿಕೆಗೆ ಒಂದು ಪ್ರಮುಖ ಉದಾಹರಣೆ ಎಂದೇ ಹೇಳಬಹುದು. ಒಂಬತ್ತು ವರ್ಷಗಳ ಮಾತುಕತೆಗಳ ನಂತರ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಸಿಂಧೂ ನದಿ ನೀರು ಒಪ್ಪಂದ ಹೇಗೆ ಕೆಲಸ ಮಾಡುತ್ತದೆ?

ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ಮೇಲೆ ಭಾರತ ನಿಯಂತ್ರಣ ಹೊಂದಿದ್ದರೆ, ಪಾಕಿಸ್ತಾನವು ಪಶ್ಚಿಮದ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ನಿಂದ ನೀರನ್ನು ಪಡೆಯುತ್ತದೆ. ಇದು ಸಮತೋಲಿತವಾಗಿ ಕಂಡುಬಂದರೂ, ಒಟ್ಟು ನೀರಿನ ಹರಿವಿನ ಸುಮಾರು 80% ರಷ್ಟು ಪಾಕಿಸ್ತಾನಕ್ಕೆ ಹರಿಯುವುದರಿಂದ ಒಪ್ಪಂದದಿಂದ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಈ ನದಿಗಳು ಪಾಕಿಸ್ತಾನದಲ್ಲಿ, ವಿಶೇಷವಾಗಿ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಕೃಷಿಗೆ ಮುಖ್ಯವಾಗಿವೆ .