
ಚಿತ್ರದುರ್ಗ, ಏಪ್ರಿಲ್ 05: ಅರಣ್ಯ ಪ್ರದೇಶದಲ್ಲಿ ಮರದ ದಿಮ್ಮಿ ಕಳ್ಳತನಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಸಿ ನೆಟ್ಟು ಪೋಷಿಸುವ ಶಿಕ್ಷೆಯನ್ನು ವಿಧಿಸಿ ಜಿಲ್ಲೆಯ ಮೊಳಕಾಲ್ಮೂರು ಜೆಎಂಎಫ್ಸಿ ಕೋರ್ಟ್ಆದೇಶ ಹೊರಡಿಸಿದೆ. ದೋಷಿಗಳಾದ ವಸಂತ, ಮಲ್ಲೇಶ, ಮಲ್ಲಿಕಾರ್ಜುನ ಮತ್ತು ಸಣ್ಣಪಾಲಯ್ಯಗೆ ತಲಾ 4500 ರೂ ದಂಡ ವಿಧಿಸಬೇಕು. ಒಂದು ವೇಳೆ ದಂಡ ಕಟ್ಟದಿದ್ದಲ್ಲಿ ನಾಲ್ವರಿಗೆ 35 ದಿನ ಸಾದಾ ಶಿಕ್ಷೆ ಪ್ರಕಟಿಸಲಾಗಿದೆ. ಅರಣ್ಯದಲ್ಲಿ ನಾಲ್ವರು ತಲಾ 15 ಸಸಿ ನೆಟ್ಟು ಪೋಷಿಸಲು ಆದೇಶಿಸಲಾಗಿದೆ.
ಮುತ್ತಿಗಾರಹಳ್ಳಿ ಅರಣ್ಯದಲ್ಲಿ 2016 ಏ.14ರಂದು ಮರದದಿಮ್ಮಿ ಕಳ್ಳತನಕ್ಕೆ ನಾಲ್ವರು ಯತ್ನಿಸಿದ್ದರು. ಎತ್ತಿನಗಾಡಿಯಲ್ಲಿ ಮರದದಿಮ್ಮಿ ಸಾಗಣೆ ವೇಳೆ ಅರಣ್ಯ ಸಿಬ್ಬಂದಿ ತಡೆದಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳ ಮೇಲೆ ಎತ್ತಿನಗಾಡಿ ಹತ್ತಿಸುವ ಯತ್ನಿಸಿದ್ದರು. ಬಳಿಕ ಮರದ ದಿಮ್ಮಿ ಎಸೆದು ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಮೊಳಕಾಲ್ಮೂರು ಠಾಣೆಗೆ ಅರಣ್ಯಾಧಿಕಾರಿ ದೂರು ನೀಡಿದ್ದರು.
ಚಿತ್ರದುರ್ಗದಲ್ಲಿ ಮನೆಗಳ್ಳತನಕ್ಕೆ ವಿಫಲ ಯತ್ನ
ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ಮನೆಗಳ್ಳತನಕ್ಕೆ ಯತ್ನಿಸಿರುವಂತಹ ಘಟನೆ ನಡೆದಿದೆ. ಕಾರಲ್ಲಿ ಬಂದಿದ್ದ ಕಳ್ಳರು ಮನೆ ಆವರಣದಲ್ಲಿದ್ದ ಬಲ್ಬ್ ಹೊಡೆದು ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನಪಟ್ಟಿದ್ದಾರೆ.
ಉದ್ಯಮಿ ರವಿಶಂಕರ್ ಎಂಬುವರಿಗೆ ಸೇರಿದ ಮನೆಗಳ್ಳತನ ಯತ್ನಿಸಲಾಗಿದೆ. ಕಳ್ಳರು ಮನೆಗಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗಳ್ಳತನಕ್ಕೆ ವಿಫಲ ಯತ್ನ ಮಾಡಿದ್ದಾರೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
50ಕ್ಕೂ ಹೆಚ್ಚು ಸಿಲ್ವರ್ ಮರಗಳ ಕಳ್ಳತನ
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ಗ್ರಾಮದ ಅತ್ತೂರು ನಲ್ಲೂರು ವ್ಯಾಪ್ತಿಯಲ್ಲಿ ಇತ್ತೀಚೆಗೆ ಸ್ಥಳೀಯ ಹೊಸಕೋಟೆ ಪಂಚಾಯಿತಿಗೆ ಸೇರಿದ ಆರು ಎಕರೆ ಭೂಮಿಯಿಂದ ಇಲ್ಲಿ 50ಕ್ಕೂ ಹೆಚ್ಚು ಸಿಲ್ವರ್ ಮರಗಳನ್ನ ಮರಗಳ್ಳರು ಹಾಡಹಗಲೇ ಕದ್ದೊಯ್ದಿ ಘಟನೆ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಎರಡು ಲಾರಿ ಹಾಗೂ ಕ್ರೇನ್ ಅನ್ನ ವಶಪಡಿಸಿಕೊಂಡಿದ್ದರು.