ಕಾರು ಅಪಘಾತವನ್ನೇ ಹಲ್ಲೆ ಎಂದ ಬಿಜೆಪಿ ಮುಖಂಡ: ಮಣಿಕಂಠ ರಾಠೋಡ್ ಮೇಲಿನ ಹಲ್ಲೆಯ ಅಸಲಿಯತ್ತು ಬಟಾಬಯಲು

ಕಲಬುರಗಿ, (ಡಿಸೆಂಬರ್ 06): ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ (Manikanta Rathod)ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರು ಅಪಘಾತವನ್ನೇ ಹಲ್ಲೆ ಮಾಡಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದ ಮಣಿಕಂಠ ರಾಠೋಡ್ ಅಸಲಿಯತ್ತು ಬಟಾಬಯಲಾಗಿದೆ. ಹಲ್ಲೆ ಪ್ರಕರಣ ಸಂಬಂಧ ಮಣಿಕಂಠ ರಾಠೋಡ್​ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಣಿಕಂಠನ ನೌಟಂಕಿ ಆಟ ಬಯಲಾಗಿದೆ. ಈ ಮೂಲಕ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡು ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದರು ಎನ್ನುವುದು ಗೊತ್ತಾಗಿದೆ.

ಕಾರು ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಕಥೆ ಕಟ್ಟಿದ ಮಣಿಕಂಠ ರಾಠೋಡ್, ನವೆಂಬರ್ 18 ರಂದು ಮಧ್ಯರಾತ್ರಿ ಹಲ್ಲೆ ಮಾಡಿದ್ದಾರೆ ಎಂದು ಮಣಿಕಂಠ ಹೇಳಿದ್ದ. ಅದಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದ. ಅಷ್ಟೇ ಅಲ್ಲದೇ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದ್ರೆ, ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸಿದಾಗ ಮಣಿಕಂಠ ರಾಠೋಡ್ ಕಟ್ಟು ಕಥೆಯ ಸತ್ಯಾಂಶ ಬಯಲಿಗೆ ಬಂದಿದೆ. ಇದರೊಂದಿಗೆ ಮಣಿಕಂಠ, ಪ್ರಿಯಾಂಕ್ ಖರ್ಗೆ ಮೇಲೆ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಮಣಿಕಂಠ ರಾಠೋಡ್​ನ ಅಸಲಿ ಕಥೆ ಹೀಗಿದೆ

ಬಿಜೆಪಿ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ದೂರು ಗಂಭೀರವಾಗಿ ಪರಿಗಣಿಸಿದ್ದ ಶಹಬಾದ್ ಪೊಲೀಸರು, ಈ ಪ್ರಕರಣವನ್ನ ಬೆನ್ನತ್ತಿ ಹೋದಾಗ ಅಸಲಿಯತ್ತು ಬಟಾಬಯಲಾಗಿದೆ. ಮಣಿಕಂಠ ರಾಠೋಡ್ ಇನ್ನೋವಾ ಕ್ರಿಸ್ಟಾ ವೈಟ್ ಕಲರ್ ಕಾರು ಯಾದಗಿರಿ ಜಿಲ್ಲೆಯ ಚೆಪಟ್ಲಾ ಬಳಿ ಅಪಘಾತವಾಗಿತ್ತು. ನವಂಬರ್ 18 ರ ಮಧ್ಯರಾತ್ರಿ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಮರಕ್ಕೆ ಡಿಕ್ಕಿ ಹೊಡೆದ ಹಿನ್ನಲೆ‌ ಕಾರಿನಲ್ಲಿದ್ದ ಮಣಿಕಂಠ ರಾಠೋಡ್ ಗಾಯಗೊಂಡಿದ್ದ. ಗಾಯಗೊಂಡ ಮಣಿಕಂಠ ರಾಠೋಡ್ ತನ್ನ ಮತ್ತೊಂದು ಕಾರಿನಲ್ಲಿ ತೆರಳಿದ್ದ. ಇನ್ನು ಅಪಘಾತಗೊಂಡ ಇನ್ನೋವಾ ಕ್ರಿಸ್ಟಾ ಕಾರನ್ನು ಟೋಯಿಂಗ್ ಮೂಲಕ ರಾತ್ರೋ ರಾತ್ರಿ ಹೈದರಾಬಾದ್ ಶಿಫ್ಟ್ ಮಾಡಿಸಿದ್ದ.

ತನ್ನ ಮತ್ತೊಂದು ಕಾರಿನಲ್ಲಿ ಚಿತ್ತಾಪುರಕ್ಕೆ ಆಗಮಿಸಿದ್ದ ಮಣಿಕಂಠ ರಾಠೋಡ್, ಚಿತ್ತಾಪುರದಿಂದ ಕಲಬುರಗಿಗೆ ಬರುವಾಗ ಹಲ್ಲೆ ಮಾಡಲಾಗಿದೆ ಎಂದು ಕಥೆ ಕಟ್ಟಿದ್ದ. ತನ್ನದೆ ಕಾರಿನ ಗಾಜನ್ನ ಒಡೆದು ಹಾಕಿ ಏಳೆಂಟು ದುಷ್ಕರ್ಮಿಗಳಿಂದ ಹಲ್ಲೆಯಾಗಿದೆ ಎಂದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಬಳಿಕ ಚಿತ್ತಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದ. ಆದ್ರೆ, ಮಣಿಕಂಠ ರಾಠೋಡ್ ಕಾರಿನಲ್ಲಿ ಬರುವಾಗ ಹಲ್ಲೆಯಾದ ಕಾರಿನಲ್ಲಿ ಒಂದೇ ಒಂದು ಹನಿ ರಕ್ತ ಬಿದ್ದಿರಲಿಲ್ಲ.

ಇನ್ನು ಮಣಿಕಂಠ ರಾಠೋಡ್ ಕಾಲ್ ರೇಕಾರ್ಡ್ ಹಿಸ್ಟರಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತಿದಾಗ ಹಲ್ಲೆಯ ಕಥೆ ಅಪಘಾತದ ಕಥೆಯಾಗಿ ಬಯಲಾಗಿದೆ. ಹಲ್ಲೆ ಪ್ರಕರಣ ಬೇಧಿದಸಿದ ಬಳಿಕ ಮಣಿಕಂಠ ರಾಠೋಡ್ ಜೊತೆಗಿದ್ದವನನ್ನ ವಿಚಾರಣೆ ನಡೆಸಿದಾಗ ಅಪಘಾತದ ಕಥೆ ಬಿಚ್ಚಿಟ್ಟಿದ್ದಾನೆ. ಇದರೊಂದಿಗೆ ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಹೋಗಿ ಮಣಿಕಂಠ ರಾಠೋಡ್ ಸಿಕ್ಕಿಬಿದ್ದಿದ್ದಾನೆ.