ಮುಟ್ಟಳ್ಳಿ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ ಪ್ರವೀಣ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ಭಟ್ಕಳ: ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ಸಾವನ್ನಪ್ಪಿದ ಹಾಡುವಳ್ಳಿಯ ಬಡಬಾಗಿಲು ನಿವಾಸಿ ಪ್ರವೀಣ ನಾಯ್ಕ ಮನೆಗೆ ಶಾಸಕ ಸುನೀಲ ನಾಯ್ಕ ಮತ್ತೊಮ್ಮೆ ಭೇಟಿ ಸಾಂತ್ವನ ಹೇಳಿದರು.

ಈ ಬಾಲಕ ತನ್ನ ಕಡುಬಡತನದಲ್ಲಿ ಅನಾರೋಗ್ಯ ಪೀಡಿತ ತಂದೆ ತಾಯಿಯನ್ನು ನೋಡಿಕೊಂಡು, ಬಿಡುವಿನ ವೇಳೆಯಲ್ಲಿ ಭಟ್ಕಳದ ಹೋಟೆಲೊಂದರಲ್ಲಿ ಕೆಲಸ ಮಾಡಿ ತನ್ನ ಓದನ್ನು ಮುಂದುವರೆಸಿ, ಹಳ್ಳಿಯ ತನ್ನ ಮನೆಯಲ್ಲಿದ್ದರೆ ಓದಿಗೆ ಮತ್ತು ಕೆಲಸಕ್ಕೆ ತೊಂದರೆಯಾಗಬಹುದೆಂದು ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಮೊನ್ನೆಯ ನೆರೆಹಾವಳಿಯಲ್ಲಿ ಮನೆಮೇಲೆ ಗುಡ್ಡ ಕುಸಿದು ಅಸುನೀಗಿದವರಲ್ಲಿ ಈ ಬಾಲಕನೂ ಒಬ್ಬನಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯೊಂದಿಗೆ ನೂರಾರು ಕನಸು ಹೊತ್ತಿದ್ದ ಜೀವ ಪ್ರಕೃತಿಯ ವಿಕೋಪಕ್ಕೆ ಹಾರಿಹೋಗಿದೆ.

ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಒದಗಿಸಲಾಗಿದೆಯಾದರೂ, ಕುಟುಂಬಕ್ಕೆ ಹೆಚ್ಚಿನ ಪರಿಹಾರದ ಆವಶ್ಯಕತೆ ಇರುವುದರಿಂದ ಇಂದು ಅವರ ಮನೆಗೆ ಎರಡನೇ ಬಾರಿ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾನವೀಯ ನೆಲೆಯಲ್ಲಿ ಆಹಾರ ಸಾಮಗ್ರಿಗಳನ್ನು ನೀಡಿ, ಬಾಲಕನ ತಂದೆಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಲಾಯಿತು.

ಕುಟುಂಬದವರಿಗೆ ನೂತನ ಮನೆ ನಿರ್ಮಾಣಕ್ಕೆ ಹಾಗೂ ಮೃತನ ತಂಗಿಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ವಿಶೇಷ ಪರಿಹಾರವನ್ನು ವದಗಿಸಲು ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಕ್ರಮ ಕೈಗೊಳ್ಳಲಾಯಿತು.