ಹೆಬ್ಬಾಳ್ಕರ್‌ ಅಪಘಾತ ಕೇಸ್‌ – ಗುದ್ದಿ ಪರಾರಿಯಾದ ಕ್ಯಾಂಟರ್‌ಗಾಗಿ ತೀವ್ರ ಹುಡುಕಾಟ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು ಹಿಟ್ ಆಂಡ್‌ ರನ್ ಮಾಡಿ ಪರಾರಿಯಾದ ಹೊರರಾಜ್ಯದ ಕ್ಯಾಂಟರ್ ವಾಹನಕ್ಕಾಗಿ ಹುಡುಕಾಟ ತೀವ್ರಗೊಂಡಿದೆ. ಪಂಜಾಬ್ ಅಥವಾ ಹರಿಯಾದ ಕ್ಯಾಂಟರ್‌ ಎನ್ನುವ ಪ್ರಾಥಮಿಕ ಮಾಹಿತಿ ಬೆಳಗಾವಿ ಪೊಲೀಸರಿಗೆ ಸಿಕ್ಕಿದೆ. ಪೊಲೀಸರು 60 ಕ್ಯಾಂಟರ್ ವಾಹನಗಳ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.

ಹಿರೇಬಾಗೇವಾಡಿ ಟೋಲ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ವಿಡಿಯೋ ಆಧಾರಿಸಿ ಪೊಲೀಸರು ಈಗಾಗಲೇ 30 ಕ್ಯಾಂಟರ್ ವಾಹನಗಳನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಆ ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಪ್ರತಿ ಕ್ಯಾಂಟರ್‌ ಮೇಲೆ ನಿಗಾ ವಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ್‌ ತಿಳಿಸಿದ್ದಾರೆ.

ಜ.14ರ ಮುಂಜಾನೆ ಬೆಂಗಳೂರಿನಿಂದ ಬೆಳಗಾವಿಗೆ ಹಿಂತಿರುಗುತ್ತಿದ್ದಾಗ ಹೆಬ್ಬಾಳ್ಕರ್‌ ಕಾರು ಅಪಘಾತವಾಗಿತ್ತು. ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮತ್ತು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಅಂಬಡಗಟ್ಟಿ ಕ್ರಾಸ್ ಬಳಿ ಒಂದು ಕಂಟೇನರ್ ಟ್ರಕ್ ಬಲಗಡೆಯಿಂದ ಎಡಗಡೆಗೆ ಬಂದಿದೆ. ಈ ವೇಳೆ ಇವರ ಕಾರಿನ ಬಲಭಾಗಕ್ಕೆ ತಾಗಿದೆ.  ಮುಂದೆ ಆಗಲಿದ್ದ ಹೆಚ್ಚಿನ ಅನಾಹುತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಗುದ್ದಿತ್ತು.