ಕಂಬಾರಿನಲ್ಲಿ ಮನಸೆಳೆದ ‘ತರಕಾರಿ ಗಣಪ’

ಕಾಸರಗೋಡು: ಉತ್ತರ ಕೇರಳದ ಕಾಸರಗೋಡು ಜಿಲ್ಲೆಯ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೀಗ ಬ್ರಹ್ಮಕುಂಭಾಭಿಷೇಕದ ಸಂಭ್ರಮ. ಜನವರಿ 28ರಿಂದಲೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಫೆಬ್ರವರಿ 2ರವರೆಗೆ ನಡೆಯಲಿದೆ.

ತರಕಾರಿಯಲ್ಲಿ ಮೂಡಿದ ಗಣಪ!: ಬ್ರಹ್ಮಕುಂಭಾಭಿಷೇಕ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆಗಾಗಿ ಊರ ಪರವೂರಿನ ಭಕ್ತಾದಿಗಳಿಂದ ಹೊರೆಕಾಣಿಕೆಗಳು ಹರಿದು ಬಂದಿದೆ. ಹೀಗೆ ಬಂದ ವಿವಿಧ ತರಕಾರಿಗಳು, ಧವಸ ಧಾನ್ಯಗಳಿಂದ ತುಂಬಿರುವ ಉಗ್ರಾಣವು ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತವೃಂದದ ಗಮನ ಸೆಳೆಯುತ್ತಿದೆ. ಜನವರಿ 30ರ ಗುರುವಾರ ಪಟ್ಲ ಫ್ರೆಂಡ್ಸ್ ಕ್ಲಬ್ ಚೇವಾರು ಇದರ ಸದಸ್ಯರು ಉಗ್ರಾಣದಲ್ಲಿ ತರಕಾರಿಗಳಿಂದ ಮನೋಹರವಾದ ಗಣಪತಿಯನ್ನು ನಿರ್ಮಿಸಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ. ವಿವಿಧ ಬಗೆಯ ತರಕಾರಿಗಳನ್ನು ಬಳಸಿ ಗಣೇಶನ ರೂಪ ಸೃಷ್ಟಿಸಿರುವುದನ್ನು ನೋಡಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಉಗ್ರಾಣ ಮುಹೂರ್ತ: ಭಕ್ತಿ ಸಾಂದ್ರವಾದ ವಾತಾವರಣದಲ್ಲಿ ಬ್ರಹ್ಮಕುಂಭಾಭಿಷೇಕದ ಪಾವನ‌ ಕ್ಷಣಗಳಲ್ಲಿ ಕಂಬಾರು ಕ್ಷೇತ್ರ ನೆರೆದವರ ಮನದಲ್ಲಿ ಶ್ರದ್ಧಾಭಕ್ತಿ ಮೂಡಿಸುತ್ತಿದೆ. ಕ್ಷೇತ್ರದ ಪ್ರಧಾನ ಅರ್ಚಕರಾಗಿರುವ ತ್ರಿಮೂರ್ತಿ ಹೆಗ್ಡೆ ಭಟ್ಟ ಅವರು ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಆರಂಭದ ದಿನ ಬೆಳಗ್ಗೆ ಕಂಬಾರು ಕ್ಷೇತ್ರದ ಆಡಳಿತ ಮೊಕ್ತೇಸರರು, ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ, ಅಷ್ಟಲಕ್ಷ್ಮಿಯರನ್ನು ಸ್ತುತಿಸಲಾಯಿತು. ದೇವಸ್ಥಾನದಲ್ಲಿ ಜರಗಲಿರುವ ಕಾರ್ಯಕ್ರಮಗಳಲ್ಲಿ ಯಾವುದೇ ಕುಂದುಕೊರತೆಗಳೂ ಬಾರದೆ, ಸಮಸ್ತವೂ ಅಕ್ಷಯವಾಗುವಂತೆ ಶ್ರೀ ಜಗದಂಬೆ, ಜಟಾಧಾರಿ ಹಾಗೂ ಪರಿವಾರ ಸಾನ್ನಿಧ್ಯಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಉಗ್ರಾಣ ಮುಹೂರ್ತ ನೆರವೇರಿಸಿದರು.

ಪೆರ್ಮುದೆ ಭಜನಾ ಮಂದಿರಕ್ಕೆ ಊರ ಪರವೂರಿನ ಭಕ್ತಾದಿಗಳಿಂದ ಹರಿದು ಬಂದ ಹೊರೆಕಾಣಿಕೆಗಳನ್ನು ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ತಂದು ಒಪ್ಪಿಸಲಾಯಿತು. ಪ್ರತಿದಿನವೂ ವಿವಿಧೆಡೆಗಳಿಂದ ಭಕ್ತವೃಂದ ಹೊರೆಕಾಣಿಕೆಗಳನ್ನು ತಂದು ಉಗ್ರಾಣ ತುಂಬಿಸುತ್ತಿದ್ದಾರೆ.

ಕ್ರಿಶ್ಚಿಯನ್‌, ಮುಸ್ಲಿಮರಿಂದಲೂ ಹೊರೆಕಾಣಿಕೆ: ಪೆರ್ಮುದೆಯ ಸಂತ ಲಾರೆನ್ಸ್ ಇಗರ್ಜಿಯ ಕ್ರಿಶ್ಚಿಯನ್ ಸದಸ್ಯರು, ಪೆರ್ಮುದೆ ಬದ್ರಿಯಾ ಜುಮಾ ಮಸೀದಿಯ ಮುಸ್ಲಿಮರು ಶ್ರೀ ಕ್ಷೇತ್ರಕ್ಕೆ ಹೊರೆ ಕಾಣಿಕೆಗಳನ್ನು ಸಮರ್ಪಿಸಿ ಮತೀಯ ಸಾಮರಸ್ಯತೆಯನ್ನು ಮೆರೆದರು.