‘ವಿನಯ ಸ್ಮೃತಿ ಸಮರ್ಥ ಶಿಕ್ಷಕ’ ಪುರಸ್ಕಾರಕ್ಕೆ ಆಯ್ಕೆಯಾದ ಗಜಾನನ ಪಟಗಾರ ಮಾಸೂರು

ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಿಂದ ಕೊಡುವ ‘ವಿನಯ ಸ್ಮೃತಿ ಸಮರ್ಥ ಶಿಕ್ಷಕ’ ಪುರಸ್ಕಾರಕ್ಕೆ ತಾಲೂಕಿನ ಹಿಂದುಳಿದ ಪ್ರದೇಶವಾದ ಮೇದಿನಿಯ ಸ.ಕಿ.ಪ್ರಾ.ಶಾಲೆಯ ಗಜಾನನ ಪಟಗಾರ ಮಾಸೂರು ಆಯ್ಕೆಯಾಗಿದ್ದಾರೆ.

ಗಜಾನನ ಪಟಗಾರ ಕುಮಟಾ ತಾಲೂಕಿನ ಮಾಸೂರು ಗ್ರಾಮದವರಾಗಿದ್ದು, 1998 ನೇ ಇಸವಿಯಲ್ಲಿ ಮೇದಿನಿಯ ಕಿ.ಪ್ರಾ.ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ತಾಲೂಕಾ ಕೇಂದ್ರದಿಂದ 47 ಕಿ.ಮೀ ದೂರದಲ್ಲಿರುವ ಮೇದಿನಿ ಕುಮಟಾ-ಸಿದ್ದಾಪುರ ಮುಖ್ಯ ರಸ್ತೆಯಿಂದ 7 ಕಿಮೀ ದೂರದ ಎತ್ತರದ ಗುಡ್ಡದ ಮೇಲಿದೆ. ಆ ಕಾಲದಲ್ಲಿ ದ್ವಿಚಕ್ರ ವಾಹನವೂ ಸಂಚಾರ ಮಾಡದ ಕಡಿದಾದ ಕಾಲುದಾರಿಯಲ್ಲಿ ಕಾಲ್ನಡಿಗೆಯಲ್ಲಿಯೇ ಕ್ರಮಿಸಿ, ವಿದ್ಯುತ್ ಸಂಪರ್ಕ ಇಲ್ಲದೇ, ಚಿಮಣಿ ದೀಪವನ್ನೇ ನಂಬಿಕೊಂಡು ಇರುಳು ಕಳೆಯಬೇಕಾದ ಸಮಯದಲ್ಲಿ ಸ್ವಲ್ಪವೂ ಬೇಸರವಿಲ್ಲದೇ ಸಂತೋಷದಿಂದ ಕರ್ತವ್ಯ ನಿರ್ವಹಿಸಿದ್ದರು.

ಶಾಲೆಗೆ ಹೊಂದಿಕೊಂಡ ಕಿರಿದಾದ ಕೊಠಡಿಯಲ್ಲೇ ವಾಸವಾದ ಇವರು, ಬಿಸಿಯೂಟದ ಸಾಮಗ್ರಿಗಳನ್ನು ಕುಮಟಾದಿಂದಲೇ ಹೊತ್ತೊಯ್ದು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದಾರೆ. 23 ವರ್ಷಗಳಲ್ಲಿ ಸುರಕ್ಷಿತ ಸ್ಥಳಕ್ಕೆ ವರ್ಗಾವಣೆಯನ್ನೂ ಬಯಸದೇ ಮೇದಿನಿಯ ನೂರಾರು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ನೀಡುತ್ತಿದ್ದಾರೆ.

ವಿನಯ ಸ್ಮೃತಿ ಸಮರ್ಥ ಶಿಕ್ಷಕ ಪುರಸ್ಕಾರವು ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕಿ ದಿ.ವಿನಯಾ ಶಾನಭಾಗ ಸ್ಮರಣೆಯಲ್ಲಿ ನೀಡುವ ಪುರಸ್ಕಾರವಾಗಿದ್ದು. 5 ಸಾವಿರ ನಗದು, ಗೌರವ ಫಲಕ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ. ಆ. 20 ರಂದು ಸಂಸ್ಥೆಯ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದೆಂದು ಸಂಸ್ಥೆಯು ತಿಳಿಸಿದೆ.