
ಕಾರವಾರ, ಜನವರಿ 22: ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ತುಂಬಿದ್ದ ಲಾರಿಯಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ತರಕಾರಿ ತುಂಬಿದ್ದ ಲಾರಿ ಸವಣೂರಿನಿಂದ ಕುಮಟಾಗೆ ತೆರಳುತ್ತಿತ್ತು.

ಮೃತರು ಹಾವೇರಿ ಜಿಲ್ಲೆ ಸವಣೂರು ಮೂಲದವರೆಂಬ ಮಾಹಿತಿ ದೊರೆತಿದೆ. ನಸುಕಿನ ಜಾವ ರಸ್ತೆಯಲ್ಲಿ ಮಂಜು ಮುಸುಕಿದ್ದರಿಂದ ಲಾರಿ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಮೂಲಕ ಶವಗಳನ್ನು ಹೊರತೆಗೆಯಲಾಗುತ್ತಿದೆ.
ಘಟನಾ ಸ್ಥಳಕ್ಕೆ ಎಸ್ಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಮೃತಪಟ್ಟವರ ವಿವರ
- ಫಯಾಜ್ ಜಮಖಂಡಿ – 45 ವರ್ಷ
- ವಾಸೀಂ ಮುಡಗೇರಿ – 35 ವರ್ಷ
- ಇಜಾಜ್ ಮುಲ್ಲಾ – 20 ವರ್ಷ
- ಸಾದೀಕ್ ಭಾಷ್ – 30 ವರ್ಷ
- ಗುಲಾಮ್ ಹುಷೇನ್ ಜವಳಿ – 40 ವರ್ಷ
- ಇಮ್ತಿಯಾಜ್ ಮುಳಕೇರಿ – 36 ವರ್ಷ
- ಅಲ್ಪಾಜ್ ಜಾಫರ್ ಮಂಡಕ್ಕಿ – 25 ವರ್ಷ
- ಜೀಲಾನಿ ಅಬ್ದುಲ್ ಜಖಾತಿ – 25 ವರ್ಷ
- ಅಸ್ಲಂ ಬಾಬುಲಿ ಬೆಣ್ಣಿ – 24 ವರ್ಷ
ಘಟನೆ ವಿವರ ಹಂಚಿಕೊಂಡ ಗಾಯಾಳು
ಭೀಕರ ಅಪಘಾತದ ಬಗ್ಗೆ ಗಾಯಾಳು ಮೊಹಮ್ಮದ್ ಮಾಹಿತಿ ಹಂಚಿಕೊಂಡಿದ್ದಾರೆ. ನಸುಕಿನ 3.30 ಗಂಟೆಗೆ ಅಪಘಾತ ಆಗಿದೆ. ನಾನು ಮಲಗಿದ್ದೆ, ಟೈರ್ ಬ್ಲಾಸ್ಟ್ ಆದ ಹಾಗೆ ಸದ್ದು ಕೇಳಿತು. ನಂತರ ಘಟನೆ ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ.
ನಾವೆಲ್ಲ ಪ್ರತಿ ವಾರ ಸಂತೆಗೆ ಹೋಗುತ್ತೇವೆ. ಸವಣೂರಿನಿಂದ ಸಂತೆಗೆ ಹೋಗುತ್ತಿದ್ದೆವು. ತರಕರಾರಿ, ಹಣ್ಣು ವ್ಯಾಪಾರ ಮಾಡುತ್ತಿದ್ದೆವು. ಘಟನೆ ಸಂಭವಿಸಿದಾಗ ಎಲ್ಲ ತರಕಾರಿಗಳು ನಮ್ಮ ಮೈ ಮೇಲೆ ಬಿದ್ದಿದ್ದವು ಎಂದು ಮೊಹಮ್ಮದ್ ಹೇಳಿದ್ದಾರೆ.

