ಭಟ್ಕಳದಿಂದ ಹೊರಟ ಸರ್ಕಾರಿ ಬಸ್‌ಗೆ ಬೆಂಕಿ

ಸಾಗರ : ಬೆಂಗಳೂರಿಗೆ ಭಟ್ಕಳದಿಂದ ಹೊರಟ ಪ್ರಯಾಣಿಕರಿದ್ದ ಬಸ್ ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ
ಘಟನೆ‌ ನಗರದ ಎಲ್.ಬಿ ಕಾಲೇಜು ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಭಟ್ಕಳದಿಂದ ಬೆಳಿಗ್ಗೆ 7.30ಕ್ಕೆ ಹೊರಟಿತ್ತು. ಹೊನ್ನಾವರ, ಸಾಗರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು ಬಸ್ಸಿನಲ್ಲಿ ಸುಮಾರು 14 ಜನ ಪ್ರಯಾಣಿಕರಿದ್ದರು.

ಬೆಳಿಗ್ಗೆ 11.15ರ ಸುಮಾರಿಗೆ ಸಾಗರ ಪ್ರವೇಶಿಸುವಾಗ ಬ್ಯಾಟರಿ ಬಾಕ್ಸ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾರೆ. ನಿರ್ವಾಹಕರು ಪ್ರಾಯಣಿಕರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ . ಕ್ಷಣಮಾತ್ರದಲ್ಲಿಯೇ ಬಸ್ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ‌ ಬೆಂಕಿಯನ್ನು ನಂದಿಸಿದೆ. ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ.