ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ – ಸ್ಥಳೀಯರಲ್ಲಿ ಆತಂಕ

ಅಂಕೋಲಾ: ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಎರಡು ಗ್ಯಾಸ್ ಟ್ಯಾಂಕರ್ ಹಾಗೂ ಒಂದು ಲಾರಿಯನ್ನು ನಿಲ್ಲಿಸಲಾಗಿತ್ತು. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಒಂದು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಹೋಗಿ ಬಿದ್ದಿದೆ.

ಗಂಗಾವಳಿ ನದಿ ವೇಗಕ್ಕೆ 7 ಕಿ.ಮೀ ದೂರಕ್ಕೆ ಕೊಚ್ಚಿ ಹೋಗಿರುವ ಟ್ಯಾಂಕರ್ ಈಗ ಸಗಡಗೇರಿ ಎಂಬಲ್ಲಿ ವಾಲಿ ನಿಂತಿದೆ. ಗ್ಯಾಸ್ ಟ್ಯಾಂಕರ್ ಸ್ಥಿತಿಯನ್ನು ಪರಿಶೀಲಿಸಲು ಬೋಟ್ ಮೂಲಕ ಭಾರತ್ ಗ್ಯಾಸ್‌ ತಜ್ಞರು ತೆರಳಿದಾಗ ಸೋರಿಕೆ ಆಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ನೀರಿನಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್‌ನಲ್ಲಿರುವ ಅನಿಲವನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸುವುದು ಹೇಗೆ ಎನ್ನುವುದೇ ತಜ್ಞರ ಮುಂದೆ ಇರುವ ದೊಡ್ಡ ಸವಾಲಾಗಿದೆ.
ಮಂಗಳೂರಿನಿಂದ ಧಾರವಾಡಕ್ಕೆ ಟ್ಯಾಂಕರ್‌ ತೆರಳುತ್ತಿತ್ತು. ಈ ಟ್ಯಾಂಕರ್‌ನಲ್ಲಿ ಸುಮಾರು 30 ಟನ್‌ ಅನಿಲವಿದೆ. ಸೋರಿಕೆ ಭೀತಿಯಿಂದ ಪರಿಸರದ ನಿವಾಸಿಗಳಿಗೆ ಬೆಂಕಿ ಒಲೆ ಮತ್ತು ವಿದ್ಯುತ್‌ ದೀಪ ಹಚ್ಚದಂತೆ ಜಿಲ್ಲಾಡಳಿತ ಸೂಚಿಸಿದೆ.