15 ವರ್ಷದ ಬಾಲಕನಿಗೆ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ; ಉತ್ತರ ಕರ್ನಾಟಕದಲ್ಲೇ ಇದೇ ಮೊದಲು

ಬಾಗಲಕೋಟೆ, ಜೂ.30: ಬೆನ್ನು ಮೂಳೆ ಡೊಂಕಾಗಿ ಯುವಕನ ಅಂದವನ್ನೇ ಕಸಿದುಕೊಂಡಿತ್ತು. ಇಂತಹ ಬೆನ್ನನ್ನು ಶಸ್ತ್ರಚಿಕಿತ್ಸೆ ‌ಮಾಡಿದ ವೈದ್ಯರು, ಬಾಲಕನ ವಿಕೃತಿಯನ್ನು ದೂರ ಮಾಡಿದ್ದಾರೆ. ಆ ಬಾಲಕನ ಹೆಸರು ಅನ್ವರ್ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಳ್ಳಿಗುತ್ತಿ ಗ್ರಾಮದ ನಿವಾಸಿ. 15 ವರ್ಷದ ಬಾಲಕನ ಬೆನ್ನು ಮೂಳೆ ಹುಟ್ಟುತ್ತಲೇ ವಕ್ರವಾಗಿತ್ತು. 75 ಪ್ರತಿಶತ  ರಷ್ಟು ಡೊಂಕಾಗಿದ್ದ ಮೂಳೆಯನ್ನು ಸತತ ಐದು ತಾಸು ಆಪರೇಷನ್ ಮಾಡಿ ಯಶಸ್ವಿಗೊಳಿಸಿದ್ದಾರೆ. ಇದಕ್ಕೆ ಸ್ಕೊಲಿಯೋಸಿಸ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಅದನ್ನ ಸ್ಪೈನಲ್ ಡಿಪಾರ್ಮೆಟಿ ಕರೆಕ್ಷನ್ ಸರ್ಜರಿ ಮಾಡಿ ವೈದ್ಯರು ಬೆನ್ನು ಮೂಳೆ ನೇರ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇದು ಮೊದಲ ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿದೆ.

ಅನ್ವರ್ ಈ ಸಮಸ್ಯೆಯಿಂದ ಯಾವುದೇ ನೋವು ಅನುಭವಿಸುತ್ತಿರಲಿಲ್ಲ. ಆದರೆ, ಇದು ಮಾನಸಿಕ ಯಾತನೆಯಾಗಿತ್ತು. ಅಪಮಾನವನ್ನು ಎದುರಿಸಬೇಕಾಗಿತ್ತು. ಇದರಿಂದ ವಿಕೃತವಾಗಿ ಕಾಣುವಂತಾಗಿತ್ತು. ಆದರೆ, ಈಗ ಎಲ್ಲರಂತೆ ಸಾಮಾನ್ಯನಾಗಿದ್ದಾನೆ. ಡಾ. ಉದಯ್ ಗುಳೇದ, ಡಾ. ಕಾಡಪ್ಪ ಶೆಡ್ಯಾಳ್, ಡಾ. ಅರ್ಜುನ. ಅನಸ್ತೇಶಿಯಾ ವೈದ್ಯ ವಿಶ್ವನಾಥ ಬೈರೆ, ಡಾ. ಅರುಣ್​ ಹಳ್ಳಿ ಸೇರಿ ಯಶಸ್ವಿ ಚಿಕಿತ್ಸೆ ಮಾಡಿದ್ದಾರೆ. 10 ರಿಂದ 15 ಸೆ.ಮೀ ಆಪರೇಷನ್ ಆಗಿದೆ.

ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಕುಟುಂಬಸ್ಥರು ಸಂತಸ

ನ್ಯೂರೊಮಾನಿಟರ್ ಅಡಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಇದು 100 ಜನರಲ್ಲಿ ಒಬ್ಬರಿಗೆ ಇರುತ್ತದಂತೆ. 80 ಪರ್ಸೆಂಟ್ ಜನರಿಗೆ ಇಂತಹ ಸಮಸ್ಯೆಯಿಂದ ನೋವು ಇರೋದಿಲ್ಲ. ಆದರೆ, ವಿಕೃತವಾಗಿ ಕಾಣುತ್ತಾರೆ. 20% ಜನರಿಗೆ ನೋವು ಇರುತ್ತದೆ. ಇದರ ಜೊತೆಗೆ 4 ವರ್ಷದ ರಶ್ಮಿ ಎಂಬ ಮಗು ಕನ್ಜೆನೈಟಲ್ ಹೆವರ್ಟಿಬ್ರಾ ಸಮಸ್ಯೆಯಿಂದ ಬಳಲುತ್ತಿತ್ತು. ಇದನ್ನು ಕೂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಕುಟುಂಬಸ್ಥರು ಸಂತಸಗೊಂಡಿದ್ದು, ವೈದ್ಯರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಒಟ್ಟಿನಲ್ಲಿ ವೈದ್ಯರ ಕಾಳಜಿಯಿಂದ ಬಾಲಕ-ಬಾಲಕಿ ಇಬ್ಬರು ಸಾಮಾನ್ಯರಂತಾಗಿದ್ದಾರೆ. ವೈದ್ಯರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಿರಾಳತೆ ಇದ್ರೆ, ಕುಟುಂಬಸ್ಥರು ಎಲ್ಲ ಸರಿಯಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.