ಮುಂಗಾರು ಪೂರ್ವ ಭರ್ಜರಿ ಮಳೆ: ಬಿತ್ತನೆಗೆ ಅನ್ನದಾತ ಅಣಿ

ಬಾಗಲಕೋಟೆ: ಸತತವಾಗಿ ಸುರಿಯುತ್ತಿರುವ ಮಳೆ, ಎಲ್ಲೆಡೆ ಹಸಿರಿನ ಛಾಯೆ ಮುಂಗಾರು ಆಗಮನಕ್ಕೆ ನಿಶಾನೆ ತೋರಿಸಿದೆ, ಜಿಲ್ಲೆಯಾದ್ಯಂತ ಕೃಷಿಕರು ಬಿತ್ತನೆಗಾಗಿ ಸಿದ್ಧತೆ ಕೈಗೊಂಡಿದ್ದಾರೆ.

ಕಳೆದ ಮುಂಗಾರು, ಹಿಂಗಾರಿನ ವಿಫಲತೆಯಿಂದ ಬರ ಆವರಿಸಿ ಜಿಲ್ಲೆಕಂಗೆಟ್ಟಿದೆ. ಆದರೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ಹೀಗಾಗಿ ಕೃಷಿಕರ ಮೊಗದಲ್ಲಿ ನೆಮ್ಮದಿ ಕಾಣುತ್ತಿದೆ. ಭೂದೇವಿಗೆ ನಮಸ್ಕರಿಸಿ ಕೃಷಿ ಚಟುವಟಿಕೆಗೆ ಚಾಲನೆ ನೀಡಿದ್ದಾರೆ.

ಭರ್ತಿ ಮಳೆ

ಜಿಲ್ಲೆಯಾದ್ಯಂತ ಮೇ ತಿಂಗಳಿನಲ್ಲಿ ಆರಂಭಗೊಂಡಿರುವ ಮಳೆ ಉತ್ತಮ ಮುಂಗಾರಿನ ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ ಈ ಬಾರಿ ಮುಂಗಾರು ಭರ್ತಿ ಫಸಲು ತಂದುಕೊಡುವ ನಿರೀಕ್ಷೆಯಿದೆ. ಪರಿಣಾಮ ಕೃಷಿಕರು ಭೂಮಿ ಹದಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ 2 ಲಕ್ಷ 83 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಕೆಲವೆಡೆ ಮಣ್ಣು ಅತಿಯಾಗಿ ಹಸಿಯಾದ ಕಾರಣ ಹದಗೊಳಿಸಲಾಗಿಲ್ಲ. ಈವರೆಗೆ ಶೇ.80 ರಂದು ಭೂಮಿ ಹದಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಜೂ.15 ರಂದು ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಜೂ.7 ರಂದು ಮೃಗಶಿರಾ ಮಳೆಯ ಆಗಮನದೊಂದಿಗೆ ಮುಂಗಾರಿಗೆ ಅಧಿಕೃತ ಚಾಲನೆ ದೊರೆಯಲಿದೆ.

ಬೀಜ, ಗೊಬ್ಬರಕ್ಕೆ ಬೇಡಿಕೆ

ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ, ಹೆಸರು, ತೊಗರಿ, ಮೆಕ್ಕೆಜೋಳ, ಸೋಯಾಬಿನ್‌ ಬೆಳೆಯಲಾಗುತ್ತದೆ. ಈ ಪೈಕಿ ಹೆಸರು ಬೆಳೆ ಅತ್ಯಧಿಕ ಬೇಡಿಕೆಯದ್ದಾಗಿದೆ. ಮಳೆ ಉತ್ತಮವಾಗಿ ಸುರಿದರೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಭರ್ತಿ ಬೇಡಿಕೆ. ಹಲವು ಬಾರಿ ಬಿತ್ತನೆ ಬೀಜ ಖರೀದಿಸಲು ಮೈಲುದ್ದದ ಸಾಲು ಕಂಡ ಉದಾಹರಣೆಗಳಿವೆ. ಕೃಷಿ ಇಲಾಖೆಯಿಂದ ಬಿತ್ತನೆಗಾಗಿ ಪರಿಕರ ಪೂರೈಕೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಅಂದಾಜು 24, 658 ಕ್ವಿಂಟಲ್‌ ಬಿತ್ತನೆ ಬೀಜದ ಅವಶ್ಯಕತೆಯಿದ್ದು, 18 ಸಾವಿರ ಕ್ವಿಂಟಲ್‌ ಬೀಜ ಸಂಗ್ರಹವಿದೆ. ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್‌, ಎಂಓಪಿ, ಎಸ್‌ಎಸ್‌ಪಿ ಸೇರಿದಂತೆ 71, 153 ಮೆ.ಟನ್‌ ರಸಗೊಬ್ಬರ ಲಭ್ಯವಿದೆ. ಹೆಚ್ಚುವರಿ ಬಿತ್ತನೆ ಬೀಜ ಪೂರೈಕೆ ಕೇಂದ್ರಗಳನ್ನು ಸ್ಥಾಪಿಸಿ ಕೊರತೆಯಾಗದಂತೆ ನೋಡಿಕೊಳ್ಳಲು ಇಲಾಖೆ ಸಿದ್ಧತೆ ನಡೆಸಿದೆ.

ರೈತರು ತಾವು ತಯಾರಿಸಿದ ಬೀಜ ಬಿತ್ತನೆ ಮಾಡುತ್ತಿದ್ದರೆ ಬೀಜೋಪಚಾರ ಕೈಗೊಳ್ಳಬೇಕು. ಮೊದಲಿಗೆ ಕೆಲವು ಬೀಜ ಮೊಳಕೆ ಹಾಕಿ ನೋಡಿ ನಂತರ ಬಿತ್ತನೆ ಮಾಡಬೇಕು. ರೈತರು ಖರೀದಿಸಿದ ಬೀಜದ ಪ್ಯಾಕೆಟ್‌ಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ನಕಲಿ ಬೀಜ, ಗೊಬ್ಬರ ಮಾರಾಟ ತಡೆಗೆ ನಿಗಾ ವಹಿಸಲಾಗಿದೆ. ಮುಂಗಾರು ಪೂರ್ವ ಮಳೆ ಶೇ.105 ರಷ್ಟಾಗಿದ್ದು, ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯುವ ನಿರೀಕ್ಷೆಯಿದೆ.