ಉತ್ತರ ಕನ್ನಡ: ಹಿಂದೂ ಸಮಾಜದ ಪೂಜನೀಯ ಕೊಕ್ತಿ ಕೆರೆಗೆ ಹರಿದು ಬಂತು ರಕ್ತ ಮಿಶ್ರಿತ ನೀರು

ಕಾರವಾರ, ಜೂನ್​ 19: ಹಿಂದೂ ಸಮಾಜದ ಪೂಜ್ಯನೀಯ ಕೊಕ್ತಿ ಕೆರೆಗೆ ರಕ್ತ ಮಿಶ್ರಿತ ನೀರು ಹರಿದು ಬಂದಿರುವ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ. ಬಕ್ರಿದ್ ಹಬ್ಬ ಹಿನ್ನೆಲೆಯಲ್ಲಿ ಪ್ರಾಣಿ ವಧೆ ಮಾಡಿ ರಕ್ತವನ್ನು ಇನ್ನೂ ಸಂಪೂರ್ಣಗೊಳ್ಳದ ಚರಂಡಿಗೆ ಹರಿಬಿಟ್ಟರುವ ಶಂಕೆ ವ್ಯಕ್ತವಾಗಿದೆ. ಚರಂಡಿ ನೀರು ಕೆರೆಯಲ್ಲಿ ಮಿಶ್ರಿತವಾಗಿದೆ. ಬಂದರ್​ ರೋಡ್​ ಎರಡನೇ ಕ್ರಾಸ್​ ಕೋಕ್ತಿ ನಗರದ ಅಕ್ಕಪಕ್ಕದ ಮನೆಗಳಿಂದಲೇ ಜಾನುವಾರು, ಕುರಿಯ ರಕ್ತ ಚರಂಡಿಯಲ್ಲಿ ನೀರಿನಂತೆ ಹರಿದಿದೆ. ಬಂದರ ರಸ್ತೆಯಲ್ಲಿ ಕೋಕ್ತಿ ನಗರದ ಅಕ್ಕಪಕ್ಕದ ಇನ್ನೂ ಚರಂಡಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅದನ್ನು ಸಾರ್ವಜನಿಕರಿಗೆ ಬಳಸಲು ಅನುವು ಮಾಡಿಕೊಟ್ಟಿಲ್ಲ.

ಆದರೆ, ಯಾವುದೊ ಮನೆಯವರೂ ಪ್ರಾಣಿ ವಧೆ ಮಾಡಿ ರಕ್ತವನ್ನು ಚರಂಡಿಯಲ್ಲಿ ಹರಿ ಬಿಟ್ಟಿದ್ದು, ಇದರಿಂದ ಮಳೆ ನೀರಿನೊಂದಿಗೆ ರಕ್ತವೂ ಕೋಕ್ತಿ ಕೆರೆ ಸೇರಿದೆ. ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆರೆಗೆ ರಕ್ತ ಮಿಶ್ರಿತ ನೀರು ಸೇರಿಕೊಂಡಿದ್ದನ್ನು ಕಂಡು ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಗೊಂಡಿದ್ದಾರೆ. ಹಿಂದೂ ಸಮುದಾಯದ ವಿಶೇಷವಾಗಿ ಗೊಂಡ ಸಮುದಾಯವರು ಪೂಜ್ಯ ಭಾವನೆಯಿಂದ ನೋಡುವ ಕೆರೆ ಮಲೀನಗೊಂಡಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪುರಸಭೆಯ ಅಧಿಕಾರಿಗಳು, ಒಳಚರಂಡಿ ಇಲಾಖೆ ಅಧಿಕಾರಿಗಳು ಮೊದಲು ರಕ್ತ ಮಿಶ್ರಿತ ನೀರು ಕೆರೆಗೆ ಹರಿಯುವುದನ್ನು ತಪ್ಪಿಸಿದ್ದಾರೆ. ಬಳಿಕ ಚರಂಡಿಯಲ್ಲಿ ಜಮಾಗೊಂಡ ರಕ್ತದ ನೀರನ್ನು ಟ್ಯಾಂಕರ್​ ಮೂಲಕ ಬೇರೆಡೆಗೆ ಸಾಗಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.