ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ – ಜಲಪಾತಗಳಿಗೆ ಜೀವ ಕಳೆ

ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಮತ್ತೊಂದೆಡೆ, ಸಮುದ್ರದಲ್ಲಿ ಅಲೆಗಳ ಅಬ್ಬರ ಹಚ್ಚಾಗಿದ್ದು, ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಹೊನ್ನಾವರ, ಜೂ. 8 : ಉತ್ತರ ಕನ್ನಡ  ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಬತ್ತಿ ಹೋಗಿದ್ದ ಜಿಲ್ಲೆಯ ಜಲಪಾತಗಳಿಗೆ ಮಳೆಯ ಸಿಂಚನದಿಂದ ಜೀವಕಳೆ ಬಂದಿದ್ದು, ಸಮುದ್ರದಲ್ಲಿ ಅಲೆಯ ಅಬ್ಬರ ಹೆಚ್ಚಾದ ಕಾರಣ ಜಿಲ್ಲಾಡಳಿತ ಸಾರ್ವಜನಿಕರಿಗೆ ಕಡಲ ತೀರಕ್ಕೆ ನಿರ್ಬಂಧ ಹೇರಿದೆ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಿಸಿಲಿನ ಬೇಗೆಯಿಂದ ಒಣಗಿ ಬರಡಾಗಿದ್ದ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳು ಮಳೆಯಿಂದ ಹಚ್ಚ ಹಸಿರಾಗಿದ್ದರೆ, ಇನ್ನೊಂದೆಡೆ ಅಲ್ಲಲ್ಲಿ ಬೆಟ್ಟ ಗುಡ್ಡಗಳನ್ನು ಸೀಳಿ ಧರೆಗಿಳಿಯುತ್ತಿರುವ ಜಲಪಾತಗಳ ದೃಶ್ಯ ನೋಡಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹತ್ತು ಹಲವು ಜಲಪಾತಗಳಿವೆ. ಆದರೆ, ಬೆಸಿಗೆಯಲ್ಲಿ ಬಹುತೇಕ ಜಲಪಾತಗಳು ಬತ್ತಿಹೋಗಿದ್ದವು. ಕಳೆದ ಒಂದು ವಾರದಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಸದ್ಯ ಜಲಪಾತಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಯಾವುದೇ ಅಪಾಯ ಇಲ್ಲ. ಹಾಗಾಗಿ ಹಚ್ಚ ಹಸಿರು ಬೆಟ್ಟ ಗುಡ್ಡಗಳ ಮಧ್ಯದ ಜಲಪಾತಗಳಲ್ಲಿ ಯುವಕ ಯುವತಿಯರು ಎಂಜಾಯ್ ಮಾಡುತ್ತಿರುವ ದೃಶ್ಯ ಜಿಲ್ಲೆಯ ಕೆಲವು ಜಲಪಾತಗಳಲ್ಲಿ ಕಾಣಸಿಗುತ್ತಿತ್ತು.

ಮಳೆಯ ಅಬ್ಬರದ ಮಧ್ಯೆ ಸಮುದ್ರದ ಅಲೆಗಳ ಅಬ್ಬರವೂ ಸಹಜವಾಗಿ ಹೆಚ್ಚಾಗುತ್ತಿರುವ ಕಾರಣ, ಮೀನುಗಾರರು ಹಾಗೂ ಪ್ರವಾಸಿಗರು ಯಾರೂ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿಯ ಖಡಕ್ ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಕ್ಕೆ ಯಾರೂ ಕೂಡ ಇಳಿಯದಂತೆ ನಿರ್ಬಂಧ ಹೇರಿ ಬೊರ್ಡ್​​​ಗಳನ್ನು ಹಾಕಲಾಗಿದೆ. ಪ್ರತಿ ಬೀಚ್ ಗಳಲ್ಲೂ ಗಾರ್ಡ್​​ಗಳನ್ನು ನೇಮಕ ಮಾಡಿ ನಿಗಾ ಇಡುವ ಕೆಲಸ ಮಾಡಿದೆ. ಮುಂಡಗೋಡ, ಯಲ್ಲಾಪೂರ ಹಾಗೂ ಶಿರಸಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ಮುಂಗಾರು ಮಳೆ ಚುರುಕುಮುಟ್ಟಿಸಿದೆ.