ಅನಂತ್‌ ಕುಮಾರ್‌ ಹೆಗಡೆ ಕಾರ್ಯಕರ್ತರ ಮನೋಭಾವನೆ ಪ್ರತಿನಿಧಿಸಿದ್ದಾರೆ – ಸಿ.ಟಿ.ರವಿ

ಸಿದ್ದಾಪುರ, ಮೇ 05 : ಅನಂತ್ ಕುಮಾರ್ ಹೆಗಡೆ ಕಾರ್ಯಕರ್ತರ ಮನೋಭಾವನೆ ಪ್ರತಿನಿಧಿಸಿದ್ದಾರೆ. ಅವರ ಜೊತೆ ಮಾತನಾಡಿದವರೊಂದಿಗೆ ದೇಶದ ಪ್ರಶ್ನೆ ಇದೆ. ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ನನಗಿದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿಟಿ ರವಿ ಸಿದ್ದಾಪುರದಲ್ಲಿ ಹೇಳಿದರು.

ತಾಲೂಕಿನ ತಂಡಾಗುಂಡಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಶಿವರಾಮ್ ಹೆಬ್ಬಾರ್ ಬಗ್ಗೆ ಮಾತನಾಡಿದ ಸಿ.ಟಿ. ರವಿ, ಯಾವುದೇ ಒಬ್ಬ ರಾಜಕಾರಣಿಗೆ ಕನಿಷ್ಠ ಮೌಲ್ಯವಿರಬೇಕು. ಒಂದು ಪಕ್ಷದಲ್ಲಿದ್ದು ಇನ್ನೊಂದು ಪಕ್ಷಕ್ಕೆ ಕೆಲಸ ಮಾಡಿದರೆ, ಅದನ್ನ ರಾಜಕೀಯ ವ್ಯಭಿಚಾರ ಎನ್ನುತ್ತಾರೆ. ಒಂದು ಪಕ್ಷ ಇಷ್ಟವಾಗಿಲ್ಲ ಎಂದರೆ, ರಾಜೀನಾಮೆ ಕೊಡುವುದು ರಾಜಮಾರ್ಗ. ವ್ಯಭಿಚಾರ ಮಾಡೋರನ್ನ ಜನರು ಹೇಗೆ ನೋಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಅಭ್ಯರ್ಥಿಗಳು ಮತದಾರರ ಮೇಲೆ ಎಷ್ಟು ಪ್ರಭಾವ ಬೀರುತ್ತಾರೋ ಅದಕ್ಕಿಂತ ಜಾಸ್ತಿ ಪ್ರಧಾನ ಮಂತ್ರಿಗಳು ಪ್ರಭಾವ ಬೀರುತ್ತಾರೆ. ಜಗತ್ತಿನಲ್ಲಿ ನಮ್ಮ ದೇಶ ತಲೆತಗ್ಗಿಸಬಾರದು ಎನ್ನುವ ಮನೋಭಾವನೆ ಜನರಲ್ಲಿದೆ. ಹಾಗೆ ತಲೆತಗ್ಗಿಸಬಾರದು ಎಂದರೆ ಮೋದಿ ಅಂತವರ ನೇತೃತ್ವ ಬೇಕಾಗಿದೆ ಎನ್ನುವ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.

ಇಂಡಿಯಾ ಒಕ್ಕೂಟದಲ್ಲಿ ತಮ್ಮ ನಾಯಕರು ಯಾರು ಎನ್ನುವದನ್ನು ತೀರ್ಮಾನ ಮಾಡಿಕೊಂಡಿಲ್ಲ. ಬೆಂಗಳೂರು, ಡೆಲ್ಲಿಯಲ್ಲಿ ಸಮಾವೇಶ ನಡೆಸಿ ಕೈ ಕೈ ಹಿಡಿದುಕೊಂಡವರು ಈಗ ಕೈ ಕಸಿದಿದ್ದಾರೆ.  ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ  ಕಾಗೇರಿ ಅವರನ್ನು ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು.