Breaking: ಸಿಎಸ್​ಕೆ ನಾಯಕತ್ವದಿಂದ ಕೆಳಗಿಳಿದ ಧೋನಿ..! ಹೊಸ ನಾಯಕ ಯಾರು ಗೊತ್ತಾ?

IPL 2024: ಸಿಎಸ್​ಕೆ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

ಚೆನ್ನೈ, ಮಾರ್ಚ್‌ 21 : 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್​ಕೆ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಧೋನಿ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

ವಾಸ್ತವವಾಗಿ ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಪೋಹಗಳನ್ನು ಸುಳ್ಳು ಮಾಡಿದ್ದ ಧೋನಿ, ಮತ್ತೆ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದರು. ಆದರೆ ಲೀಗ್​ ಆರಂಭಕ್ಕೂ ಮುನ್ನ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವೆ ಎಂದಿದ್ದ ಧೋನಿ, ಇದೀಗ ನಾಯಕತ್ವವನ್ನು ತ್ಯಜಿಸಿ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಿಲಿದ್ದಾರೆ.

ವಾಸ್ತವವಾಗಿ ಪ್ರತಿ ಸೀಸನ್‌ನಂತೆ, ಐಪಿಎಲ್ ಪ್ರಾರಂಭವಾಗುವ ಮೊದಲು, ಎಲ್ಲಾ ತಂಡಗಳ ನಾಯಕರು ಟ್ರೋಫಿಯೊಂದಿಗೆ ಫೋಟೋಶೂಟ್ ಮಾಡುತ್ತಾರೆ. ಈ ಸೀಸನ್​ನಲ್ಲಿಯೂ ಫೋಟೋ ಶೂಟ್ ಏರ್ಪಡಿಸಲಾಗಿತ್ತು. ಈ ವೇಳೆ ಎಲ್ಲಾ 10 ತಂಡಗಳ ನಾಯಕರು ಫೋಟೋಶೂಟ್‌ಗೆ ಬಂದಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ಬದಲಿಗೆ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದರು. ಈ ಮೂಲಕ ಈ ಆವೃತ್ತಿಯಿಂದ ಗಾಯಕ್ವಾಡ್ ತಂಡದ ನಾಯಕರಾಗಲಿದ್ದಾರೆ ಎಂಬುದು ಖಚಿತವಾಗಿದೆ. ಅಲ್ಲದೆ ಈ ವಿಚಾರವನ್ನು ಸಿಎಸ್​ಕೆ ಫ್ರಾಂಚೈಸಿ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮಾಹಿತಿ ನೀಡಿದೆ.